ಪ್ರಜಾಸ್ತ್ರ ಸುದ್ದಿ
ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ದೇ, ಮೈಸೂರಿನ ಪೊಲೀಸ್ ವ್ಯವಸ್ಥೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗ್ತಿದೆ. ಈ ಬಗ್ಗೆ ಮಾತ್ನಾಡಿರುವ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್, ಚಾಮುಂಡಿ ಬೆಟ್ಟದ ಆಸು ಪಾಸಿನ ಜಾಗ ಅನೈತಿಕ ಚಟುವಟಿಕೆಯ ತಾಣವಾಗಿದೆ ಎಂದಿದ್ದಾರೆ.
ಸಂಜೆ 7 ಗಂಟೆಯ ನಂತರ ನಂದಿ ವಿಗ್ರಹ ಇರುವ ಜಾಗದ ಕಡೆಗೆ ಹೋದರೆ ಹುಡುಗ, ಹುಡುಗಿಯರ ಅರಬೆತ್ತಲೆಯ ದೃಶ್ಯಗಳು ಹೆಚ್ಚಾಗಿ ಕಾಣಿಸುತ್ತವೆ. ಅಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಪೊಲೀಸರು ಇರುವುದಿಲ್ಲ. ಸಿಸಿಟಿವಿ ಇಲ್ಲ. ಈ ಬಗ್ಗೆ ನಾನು ಸಾಕಷ್ಟು ಸಾರಿ ಅಧಿಕಾರಿಗಳಿಗೆ ಹೇಳಿದ್ದೇನೆ. ಆದ್ರೆ, ನಾನೀಗ ನಿವೃತ್ತ ಅಧಿಕಾರಿ ಆಗಿರುವುದ್ರಿಂದ ನನ್ನ ಮಾತು ಯಾರೂ ಕೇಳುವುದಿಲ್ಲವೆಂದು ಸುದ್ದಿ ವಾಹಿನಿಯೊಂದಕ್ಕೆ ಹೇಳಿದ್ದಾರೆ.
ಯುವಕ, ಯುವತಿ ಜೊತೆಗಿರುವ ಸಮಯವನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡ ನಾಲ್ಕೈದು ಜನ ಹುಡುಗರು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಂತೆ. ಸಂಜೆಯವರೆಗೂ ಕೊಡದೆ ಇದ್ದಾಗ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಅವರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.