ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹೊಸ ಸರ್ಕಾರ ರಚನೆಯಾಗಿ ಒಂದೊಂದು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ. ಸಚಿವರು ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಎದುರು ಇದೀಗ ಬಿಬಿಎಂಪಿ ಹಾಗೂ ಲೋಕಸಭಾ ಚುನಾವಣೆ ಇದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಸಿದ್ಧತೆ ನಡೆಸಿದೆ.
ನಿಗಮ, ಮಂಡಳಿಗೆ ಅಧ್ಯಕ್ಷರಾಗಿ ಬಹುತೇಕವಾಗಿ ಶಾಸಕರನ್ನು ನೇಮಿಸಲಾಗುತ್ತಿತ್ತು. ಕೆಲವೇ ಕೆಲವು ಪಕ್ಷದ ಮುಖಂಡರು ಅಧ್ಯಕ್ಷರಾಗುತ್ತಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ 70:30 ಸೂತ್ರದಡಿ ಅಧ್ಯಕ್ಷರನ್ನು ನೇಮಕ ಮಾಡಲು ಚಿಂತನೆ ನಡೆಸಿದೆ. ಅಂದರೆ, ಇರುವ 30 ನಿಮಗ, ಮಂಡಳಿಗಳ ಅಧ್ಯಕ್ಷಗಿರಿಯನ್ನು ಶೇಕಡ 70ರಷ್ಟು ಪಕ್ಷದ ಮುಖಂಡರಿಗೆ, ಶೇಕಡ 30ರಷ್ಟು ಶಾಸಕರಿಗೆ ನೀಡಲು ನಿರ್ಧರಿಸಿದೆಯಂತೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿ ನಾಯಕರಿಂದ ಒಪ್ಪಿಗೆ ಪಡೆದಿದ್ದು, ಅಧ್ಯಕ್ಷರ ನೇಮಕ ಪ್ರಕ್ರಿಯೆ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆಯಂತೆ. ಶಾಸಕರಾಗಲು ಸಾಧ್ಯವಾಗದೆ ಇರುವ ಮುಖಂಡರು, ಕಾರ್ಯಕರ್ತರು ನಿಗಮ, ಮಂಡಳಿ ಅಧ್ಯಕ್ಷರಾಗುವ ಮೂಲಕ ಸರ್ಕಾರದೊಂದಿಗೆ ನೇರ ಸಂಪರ್ಕ ಸಾಧಿಸುವ, ರಾಜಕೀಯದಲ್ಲಿ ಒಂದೊಳ್ಳೆ ಸ್ಥಾನ ಪಡೆಯುವುದಕ್ಕೆ ಅವಕಾಶವಾಗಲಿದೆ. ಆ ಅದೃಷ್ಟ ಯಾವೆಲ್ಲ ನಾಯಕರಿಗೆ ಬರುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.