ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಳೆದ ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಕೊನೆಗೂ ಬಂಧಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಸಧ್ಯಕ್ಕೆ ಸಂಕಷ್ಟದಿಂದ ಪಾರಾಗಿದೆ. ಯಾಕಂದರೆ, ಈತನ ಕರ್ಮಕಾಂಡಗಳಿಗೆ ಬಿಜೆಪಿ ನಾಯಕರು ಬೆಂಬಲವಾಗಿ ನಿಂತಿದ್ದಾರೆ ಅನ್ನೋ ಬೊಟ್ಟುಗಳು ಹೆಚ್ಚಾಗಿದ್ದವು.
ಮೈಸೂರಿನಲ್ಲಿ ಮಹಿಳೆಯೊಬ್ಬರು ಅತ್ಯಾಚಾರ ಹಾಗೂ ವಂಚನೆ ದೂರು ದಾಖಲಿಸಿದ್ದರು. ಇದು ಒಂದು ಕಡೆಯಾದರೆ ಇತನ ವೇಶ್ಯಾವಾಟಿಕೆ ದಂಧೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜೊತೆಗೆ ಇತನ ಸ್ನೇಹ, ವರ್ಗಾವಣೆ ದಂಧೆಯಲ್ಲಿ ಎತ್ತಿದ ಕೈಯಾಗಿದ್ದ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿಯ ಬಗ್ಗೆ ಸಾಕಷ್ಟು ಚರ್ಚೆ ಆಯಿತು.
ದಶಕಗಳಿಂದಲೇ ಮಾಂಸದಂಧೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಹೆಂಡ್ತಿಯನ್ನು ಹತ್ಯೆ ಮಾಡಿದ್ದ ಅನ್ನೋ ಆರೋಪ 15 ವರ್ಷಗಳ ಹಿಂದೆಯೆ ಕೇಳಿ ಬಂದಿದೆ. ಸಾಕಷ್ಟು ಬಾರಿ ಜೈಲು ರುಚಿ ನೋಡಿದರೂ ಇತನಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಶ್ರೀರಕ್ಷೆ ಇದ್ದ ಕಾರಣಕ್ಕೆ ಕೋಟಿ ಕೋಟಿಗೆ ಬಾಳುವ ಲೆಕ್ಕದಲ್ಲಿ ಬೆಳೆದಿದ್ದಾನೆ. ಹೀಗಾಗಿ ರಾಜ್ಯ ಸರ್ಕಾರದಲ್ಲಿನ ಸಚಿವರು, ಶಾಸಕರು, ಅವರ ಪುತ್ರರ ಜೊತೆಗೆ ಈತ ಸಂಪರ್ಕದಲ್ಲಿದ್ದಾನೆ ಎಂದು ಕಾಂಗ್ರೆಸ್, ಜೆಡಿಎಸ್ ಗಂಭೀರ ಆರೋಪ ಮಾಡಿತು.
ಈತನ ಕರ್ಮಕಾಂಡದ ಫೋಟೋಗಳು, ಮೆಸೇಜುಗಳು ಹರಿದಾಡಿದವು. ಮಾಜಿ ಸಿಎಂ ಕುಮಾರಸ್ವಾಮಿ, ಬಾಂಬೆಗೆ ಹೋದ ರಾಜಕಾರಣಿಗಳ ಜೊತೆಗೆ 12 ಹುಡುಗಿಯರನ್ನು ಪಿಂಪ್ ಸ್ಯಾಂಟ್ರೋ ರವಿ ಕಳುಹಿಸಿದ್ದ. ಅದರ ಸಾಕ್ಷಿ ನನ್ನ ಬಳಿಯಿದೆ ಅನ್ನೋ ಬಾಂಬ್ ಸಿಡಿಸುವ ಮೂಲಕ ರಾಜಕೀಯ ಅಖಾಡದಲ್ಲಿ ದೊಡ್ಡ ಅಲೆ ಸೃಷ್ಟಿಸಿತು. ಸಧ್ಯ ಈತನ ಬಂಧನವಾಗಿದೆ. ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಇವನಿಂದ ಯಾರಿಗೆ ಶಾಪ, ವರ ಅನ್ನೋದು ಕಾದು ನೋಡಬೇಕು.