ಪ್ರಜಾಸ್ತ್ರ ಸುದ್ದಿ
ಸಿಂದಗಿ: ಹಾನಗಲ್ಲನ ಕುಮಾರ ಶಿವಯೋಗಿಗಳ ಜೀವನಾಧರಿತ ಚಿತ್ರ ವಿರಾಟಪುರ ವಿರಾಗಿ ಪ್ರಿಮಿಯರ್ ಶೋ ಪಟ್ಟಣದ ವಿನಾಯಕ ಚಿತ್ರಮಂದಿರದಲ್ಲಿ ಗುರುವಾರ ನಡೆಯಿತು. ಮಹಾನ್ ಸಂತನ ಚಿತ್ರ ನೋಡಲು ತಾಲೂಕಿನ ಸುತ್ತಲಿನ ಗ್ರಾಮಗಳಿಂದ ಸಹ ಜನರು ಆಗಮಿಸಿದ್ದರು.
ಪ್ರಿಮಿಯರ್ ಶೋಗೆ ಕನ್ನೊಳ್ಳಿ ಮಠದ ಸ್ವಾಮಿ, ಗುರುದೇವ ಆಶ್ರಮದ ಶಾಂತಗಂಗಾಧ ಮಹಾಸ್ವಾಮಿ, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಅವರು ಚಾಲನೆ ನೀಡಿದರು. ಈ ವೇಳೆ ಕಿರಣ ಕೋರಿ, ಮಲ್ಲು ವಾರದ, ರವಿ ಗವಸಾನಿ, ಪ್ರಶಾಂತ ಪಟ್ಟಣಶೆಟ್ಟಿ, ಕುಮಾರ ಕಿಣಗಿ, ಸಾತಪ್ಪ ಗುಣಾರಿ, ಸದು ಕುಂಬಾರ, ಮುತ್ತು ಪಟ್ಟಣಶೆಟ್ಟಿ, ಪ್ರಸಾದ ಗುಣಾರಿ, ಚನ್ನು ಮಠ, ರುದ್ರು ಬತ್ತಾ, ಸಿದ್ದಲಿಂಗ ಕಿಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಿ.ಎಸ್.ಲಿಂಗದೇವರು ನಿರ್ದೇಶನದ ಚಿತ್ರ
ಮೌನಿ, ಕಾಡಬೆಳದಿಂಗಳು, ನಾನು ಅವನಲ್ಲ ಅವಳು ಅನ್ನೋ ಮೂರು ಚಿತ್ರಗಳಿಗೆ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪಡೆದ ನಿರ್ದೇಶಕ ಬಿ.ಎಸ್.ಲಿಂಗದೇವರು ಅವರು ವಿರಾಟಪುರ ವಿರಾಗಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ನಟ ಸುಚೇಂದ್ರ ಪ್ರಸಾದ್ ಹಾನಗಲ್ಲ ಕುಮಾರ ಶಿವಯೋಗಿಗಳ ಪಾತ್ರವನ್ನು ನಿಭಾಯಿಸಿದ್ದಾರೆ. ಅವರ ಗುರುಗಳಾಗಿ ಮೌನಿ ತಪಸ್ವಿ ಎಂದೇ ಖ್ಯಾತಿಗಳಿಸಿರುವ ಜಡೆಯ ಶಾಂತಲಿಂಗ ಮಹಾಸ್ವಾಮಿಗಳು ಕಾಣಿಸಿಕೊಂಡಿದ್ದಾರೆ.
ಗದುಗಿನ ಪುಟ್ಟರಾಜ ಗವಾಯಿಗಳು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ವೀರಶೈವ ಲಿಂಗಾಯತ ಮಠಗಳ ಸ್ವಾಮೀಜಿಗಳ ಪಾತ್ರವನ್ನು ಉತ್ತರ ಕರ್ನಾಟಕ ಭಾಗದ ಕಲಾವಿದರು ನಿಭಾಯಿಸಿದ್ದಾರೆ. ಸಮಾರು 3 ಕೋಟಿಗೂ ಅಧಿಕ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಬಸವಣ್ಣ, ಅಲ್ಲಮಪ್ರಭು, ದೇವರ ದಾಸಿಮಯ್ಯ ಸೇರಿ ಬೇರೆ ಬೇರೆ ಶರಣರ 9 ವಚನಗಳಿಗೆ ಹಾಡಿನ ರೂಪ ನೀಡಲಾಗಿದೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಜನವರಿ 13ರಿಂದ ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ.