ಪ್ರಜಾಸ್ತ್ರ ವಿಶೇಷ ವರದಿ, ಭಾಗ-7
ಸಿಂದಗಿ: ಪಟ್ಟಣದಲ್ಲಿನ ಅನಧಿಕೃತ ಅಂಗಡಿ, ವಿದ್ಯುತ್ ಸಂಪರ್ಕದ ಕುರಿತು, ಪ್ರಜಾಸ್ತ್ರ ಸತತವಾಗಿ ಸರಣಿ ವರದಿಗಳನ್ನ ಮಾಡಿದೆ. ಆದ್ರೆ, ಇವುಗಳನ್ನ ತೆರವುಗೊಳಿಸುವ ಅಧಿಕಾರ ಪುರಸಭೆ, ಕೆಇಬಿಗೆ ಇದ್ರೂ, ಕಣ್ಮುಚ್ಚಿ ಕುಳ್ತಿದೆ. ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಕೆಇಬಿ ಎಇಇ ಸಿ.ಡಿ ನಾಯಕ ಕುಂಟು ನೆಪ ಹೇಳಿ ಜಾರಿಕೊಳ್ತಿದ್ದಾರೆ.
ತಹಶೀಲ್ದಾರ್ ಕಚೇರಿ, ಕೋರ್ಟ್, ಸರ್ಕಾರಿ ಆಸ್ಪತ್ರೆ ಹತ್ತಿರ, ಕೆಇಬಿಗೆ ಹೊಂದಿಕೊಂಡಂತೆ ನೂರಾರು ಅಂಗಡಿಗಳಿವೆ. ಅಲ್ಲಿರುವುದು ಅನಧಿಕೃತವೆಂದು ಗೊತ್ತಿದ್ರೂ ಪುರಸಭೆ ಅಧಿಕಾರಿಗಳು ಕ್ರಮ ತೆಗೆದುಕೊಳ್ತಿಲ್ಲ. ಅನಧಿಕೃತ ಅಂಗಡಿಗಳಿಗೆ ವಿದ್ಯುತ್ ಸಂಪರ್ಕವಿದ್ರೂ, ಕೆಇಬಿ ಅಧಿಕಾರಿಗಳು ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ಕುಳ್ತಿದ್ದಾರೆ.
ಈ ಕುರಿತು ಉಪ ವಿಭಾಗಾಧಿಕಾರಿ ಸ್ನೇಹಲ ಲೋಖಂಡೆ ಅವರನ್ನ ಸಂಪರ್ಕಿಸಿದ್ರೆ, ಪುರಸಭೆ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದೇನೆ. ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಲು ಬರುತ್ತೋ ಆ ಪ್ರಕಾರ ಕೆಲಸ ಮಾಡುತ್ತೇವೆ ಎಂದು ‘ಪ್ರಜಾಸ್ತ್ರ’ಕ್ಕೆ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಸ್ಥಳೀಯ ಶಾಸಕ ಎಂ.ಸಿ ಮನಗೂಳಿ ಅವರನ್ನ ಕೇಳಿದ್ರೆ,..
ಈಗಾಗ್ಲೇ ಲೋಕೋಪಯೋಗಿ ಇಲಾಖೆಯವರ ಜೊತೆ ಮಾತ್ನಾಡಿದ್ದು, ಚಿಕ್ಕಸಿಂದಗಿ ಬೈಪಾಸ್ ನಿಂದ ಶಹಾಪೂರ ಪೆಟ್ರೋಲ್ ಪಂಪ್ ವರೆಗೆ 7.5X7.5 ರಸ್ತೆ ಡಾಂಬರೀಕರಣಕ್ಕೆ ಮುಂಜೂರು ಆಗಿದೆ. ನಮ್ಮ ವಿಭಾಗದಿಂದ ನೋಟಿಸ್ ಕೊಟ್ಟು ತೆರವುಗೊಳಿಸುವ ಕೆಲಸ ಮಾಡಲಾಗುತ್ತೆ. ತಹಶೀಲ್ದಾರ್ ಕಾಂಪೌಂಡ್, ಕೆಇಬಿ, ಬಸವೇಶ್ವರ ಸರ್ಕಲ್ ಬಳಿಯೂ ಅನಧಿಕೃತ ಅಂಗಡಿಗಳಿದ್ದು, ಅವುಗಳನ್ನೆಲ್ಲ ಶೀಘ್ರದಲ್ಲೇ ತೆರವುಗೊಳಿಸಲಾಗುತ್ತೆ.
ಈ ರೀತಿ ಶಾಸಕರಾದ ಎಂ.ಸಿ ಮನಗೂಳಿ ಹಾಗೂ ಎಸಿ ಸ್ನೇಹಲ ಲೋಖಂಡೆ ಅವರು ಹೇಳಿದ್ದಾರೆ. ಅನಧಿಕೃತವಾಗಿರುವುದನ್ನ ತೆರವುಗೊಳಿಸಿ, ಅವರಿಗೆ ಪರ್ಯಾಯ ರೂಪಿಸಿ, ಅದರಿಂದ ಸ್ಥಳೀಯ ಆಡಳಿತ ಇಲಾಖೆಗಳಿಗೆ ಆದಾಯ ಬರುವಂತೆ ಮಾಡಬೇಕಿದೆ. ಅಂದಾಗ ಸಿಂದಗಿ ಪಟ್ಟಣದ ಸುಧಾರಣೆಗೆ ಒಂದಿಷ್ಟು ಅನುಕೂಲವಾಗಲಿದೆ, ಅಕ್ರಮಕ್ಕೆ ಕಡಿವಾಣ ಬೀಳಲಿದೆ.