ಪ್ರಜಾಸ್ತ್ರ ಸುದ್ದಿ
ಮುಂಬೈ: ಆರ್ ಎಸ್ಎಸ್ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆ ಹಿಂದೂಪರ ಸಂಘಟನೆಗಳಿಗೆ ಶಾಕ್ ನೀಡಿದೆ. ಇದರ ಜೊತೆಗೆ ಅಚ್ಚರಿ ಸಹ ಮೂಡಿಸಿದೆ. ಅಭಿವೃದ್ಧಿ ವಿಷಯಗಳಿಗಿಂತ ಧಾರ್ಮಿಕ ವಿಚಾರಗಳು ಹೆಚ್ಚು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಭಾಗವತ್ ಹೇಳಿಕೆಯನ್ನು ಕಾಂಗ್ರೆಸ್ ಮುಖಂಡರು ಸೇರಿ ಅನೇಕರು ಸ್ವಾಗತಿಸಿದ್ದಾರೆ.
ಹಿಂದೂ ವಿಚಾರಕ್ಕಾಗಿ ಜನರು ಹತ್ತಿರವಾಗುವುದು ಆರ್ ಎಸ್ಎಸ್ ಹಾಗೂ ಬಿಜೆಪಿ ಜೊತೆಗೆ. ಹೀಗಾಗಿ ಇಂದು ಬಿಜೆಪಿ ಈ ಹಂತಕ್ಕೆ ಬೆಳೆದು ನಿಂತಿದೆ. ಇಸ್ಲಾಂ ರಾಜರಿಂದ ಹಿಂದೂ ದೇವಸ್ಥಾನಗಳು ನಾಶಗೊಂಡವು ಅನ್ನೋ ವಿಚಾರದಿಂದಾಗಿ ಮತ್ತೆ ಅವುಗಳನ್ನು ವಾಪಸ್ ಪಡೆಯುವ ಕೆಲಸಕ್ಕೆ ಮುಂದಾಗಿರುವ ಹೊತ್ತಿನಲ್ಲಿ, ಇಂತಹ ಹೋರಾಟದಲ್ಲಿ ಸಂಘಟನೆಯ ಪಾತ್ರ ಇರುವುದಿಲ್ಲ ಎಂದಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಇದೀಗ ಮಸೀದಿಗಳ ಸರ್ವೇ ಕಾರ್ಯ ನಡೆಯುವ ವಿಚಾರ ಸೇರಿ ಇನ್ನು ಹಲವು ಮಸೀದಿಗಳ ಹೆಸರು ಪ್ರಸ್ತಾಪವಾಗಿದೆ. ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಈಗಿನ ಹಿಂದೂ-ಮುಸ್ಲಿಂರು ಇತಿಹಾಸವನ್ನು ರಚನೆ ಮಾಡಿಲ್ಲ. ದಿನಕ್ಕೊಂದು ವಿವಾದ ಯಾಕೆ ಮಾಡಬೇಕು? ಮುಸ್ಲಿಂರೇನು ಹೊರಗಿನವರಲ್ಲ. ಅವರು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಎಲ್ಲ ಮಸೀದಿಗಳಲ್ಲಿ ಶಿವಲಿಂಗವನ್ನು ಯಾಕೆ ಹುಡುಕಬೇಕು ಎಂದಿದ್ದಾರೆ.
ಮೋಹನ್ ಭಾಗವತ್ ಈ ರೀತಿಯಾಗಿ ಹೇಳಿರುವುದು, ಹಿಂದೂಪರ ಸಂಘಟನೆಗಳಿಗೆ ಶಾಕ್ ಆಗಿದೆ. ಮುಸ್ಲಿಂರ ವಿರುದ್ಧ ಸದಾ ದಾಳಿಗೆ ಮುಂದಾಗುವುದನ್ನೇ ಕೆಲಸ ಮಾಡಿಕೊಂಡಿರುವ ಸಂಘಟನೆಗಳು ಗಂಭೀರವಾಗಿ ಚಿಂತಿಸಬೇಕಿದೆ. ಒಂದು ವೇಳೆ ಮೋಹನ್ ಭಾಗವತ್ ಅವರ ಮಾತನ್ನು ಹಿಂದೂಪರ ಸಂಘಟನೆಗಳು ಒಪ್ಪಿ ನಡೆದರೆ ಭಾರತ ವಿಶ್ವಕ್ಕೆ ಮತ್ತಷ್ಟು ಮಾದರಿಯಾಗಲಿದೆ ಎನ್ನುತ್ತಿದ್ದಾರೆ. ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.