ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪ್ರತಿ ವರ್ಷ ಮಣ್ಣು, ನೀರು, ಗಾಳಿ ಹಾಗೂ ಆರೋಗ್ಯದ ಕುರಿತು ಸದಾ ಚಿಂತನೆ ನಡೆಸುವ ಕಾರ್ಯಕ್ರಮಗಳು ಆಗಬೇಕು ಎಂದು ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು. ಪಟ್ಟಣದ ಶಾಂತವೀರ ಶಿವಾಚಾರ್ಯ ರೈತ ಉತ್ಪಾದಕ ಕೇಂದ್ರದಲ್ಲಿ ನಡೆದ ವಿಶ್ವ ಜಲ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಸರದ ಬಗ್ಗೆ ಚಿಂತನೆಯಿಲ್ಲದೆ ಹೋಗುತ್ತಿರುವುದರಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ನಾಲ್ಕನೇ ಮಹಾಯುದ್ಧ ಏನಾದರೂ ನಡೆದರೆ ಅದು ನೀರಿನ ಸಲುವಾಗಿಯೇ. ಹೀಗಾಗಿ ಪ್ರತಿಯೊಬ್ಬರು ನೀರಿನ ಬಳಕೆ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಪತ್ರಕರ್ತ ನಾಗೇಶ ತಳವಾರ ಮಾತನಾಡಿ, ನೀರು ಇಡೀ ಜೀವಸಂಕುಲದ ಜೀವ. ಖಾಲಿಯಾಗುತ್ತಿರುವ ಇಂಧನಗಳಲ್ಲಿ ನೀರು ಸಹ ಒಂದಾಗಿದೆ. ಹೀಗಾಗಿ ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬರು ಮಾಡಬೇಕು ಎಂದರು. ದೇಶದಲ್ಲಿ ನಿತ್ಯ 49 ಬಿಲಿಯನ್ ಲೀಟರ್ ನೀರು ವ್ಯರ್ಥವಾಗುತ್ತಿದೆ. 16 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. 60 ಕೋಟಿ ಜನರಿಗೆ ಸರಿಯಾಗಿ ನೀರೇ ಸಿಗುತ್ತಿಲ್ಲ. ದೇಶದ 21 ನಗರಗಳಲ್ಲಿ ಅಂತರ್ಜಲ ಮಟ್ಟ ಕುಸಿದು ಹೋಗಿದೆ. ಹೀಗಾಗಿ ನಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ನೀರನ್ನು ಪೋಲು ಮಾಡದಂತೆ ನೋಡಿಕೊಳ್ಳಬೇಕಿದೆ ಎಂದರು.
ಪಿಎಸ್ಐ, ನಿಂಗಪ್ಪ ಪೂಜಾರಿ, ಶಾಂತವೀರ ಶಿವಾಚಾರ್ಯ ರೈತ ಉತ್ಪದಾನ ಕೇಂದ್ರದ ನಿರ್ದೇಶಕಿ ಶೈಲಜಾ ಸ್ಥಾವರಮಠ ಸೇರಿ ಇತರರು ಮಾತನಾಡಿದರು. ಈ ವೇಳೆ ರೈತ ಕೇಂದ್ರ ನಿರ್ದೇಶಕ ಗಂಗಾರಾಮ ಪವಾರ, ಎಪಿಎಂಸಿ ಕಾರ್ಯದರ್ಶಿ ಐ.ಎಸ್ ಔರಂಗಬಾದ್, ಶಿವಾನಂದ ಜೋಗುರ, ಶಂಕರ ನಿಗಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ರೈತ ಉತ್ಪದಾನ ಕೇಂದ್ರದ ಸಿಇಒ ನಿವೇದಿತಾ ಹಿರೇಮಠ ನಿರೂಪಿಸಿ ವಂದಿಸಿದರು.