ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ನಾಲ್ಕು ಗ್ಯಾರೆಂಟಿಗಳು ಈಗಾಗ್ಲೇ ಜಾರಿಗೆ ಬಂದಿವೆ. ಈಗ ಯುವನಿಧಿ ಯೋಜನೆ ಜಾರಿಗೆ ತರಲು ಸರ್ಕಾರ ಸಜ್ಜಾಗಿದೆ. ಡಿಸೆಂಬರ್ 26ರಿಂದ ನೋಂದಣಿ ಪ್ರಕ್ರಿಯೆ ಶುರು ಎಂದು ತಿಳಿಸಲಾಗಿದೆ.
ಜನವರಿ 1, 2024ರಿಂಂದ ಈ ಯೋಜನೆ ಜಾರಿಗೆ ಬರಲಿದೆ. ಸೇವಾ ಸಿಂಧು ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಸಬಹುದು. 2022-23ನೇ ಸಾಲಿನಲ್ಲಿ ಶಿಕ್ಷಣ ಮುಗಿಸಿ 6 ತಿಂಗಳು ಕಳೆದವರು, ಉನ್ನತ ಶಿಕ್ಷಣ ಅಥವ ಯಾವುದೇ ಉದ್ಯೋಗ ಸಿಗದೆ ಇರುವವರು ಅರ್ಜಿ ಸಲ್ಲಿಸಬಹುದು. ಇದು 2 ವರ್ಷಗಳ ಯೋಜನೆಯಾಗಿದ್ದು, ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುತ್ತೆ.
ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ, ಡಿಪ್ಲೋಮಾ ಪಾಸ್ ಆದ ನಿರುದ್ಯೋಗಿಗಳಿಗೆ 1,500 ರೂಪಾಯಿ ನೀಡಲಾಗುತ್ತೆ. 2 ವರ್ಷದೊಳಗೆ ಉದ್ಯೋಗ ಸಿಕ್ಕರೆ ಯೋಜನೆ ನಿಲ್ಲಿಸಲಾಗುತ್ತೆ. ಕರ್ನಾಟಕ ಮೂಲದವರಾಗಿದ್ದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. 10, 12 ಹಾಗೂ ಪದವಿ ಶಿಕ್ಷಣ ಅಂಕಪಟ್ಟಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಆದಾಯ ಪ್ರಮಾಣದೊಂದಿಗೆ ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕಾಗುತ್ತೆ.
ಇನ್ನು ಈಗಾಗ್ಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವಾದ ನಾರಿ ಶಕ್ತಿ, ಮಾಸಿಕ 2 ಸಾವಿರ ರೂಪಾಯಿ ಗೃಹಲಕ್ಷ್ಮಿ, 200 ಯುನಿಟ್ ಉಚಿತ ವಿದ್ಯುತ್ ಯೋಜನೆಯಾದ ಗೃಹಜ್ಯೋತಿ, 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆಗಳು ಚಾಲ್ತಿಯಲ್ಲಿವೆ. ಅಕ್ಕಿ ದಾಸ್ತಾನು ಕೊರತೆಯಿಂದ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿ ಬದಲು ಒಬ್ಬರಿಗೆ 170 ರೂಪಾಯಿ ನೀಡಲಾಗುತ್ತಿದೆ.