ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ನಿಜಕ್ಕೂ ಇದೊಂದು ಅತ್ಯಂತ ಕುತೂಹಲಕಾರಿ ಸಂಗತಿ. ಪಾಳು ಬಿದ್ದ ಮನೆಯಲ್ಲಿ ಬರೋಬ್ಬರಿ 5 ಅಸ್ಥಿಪಂಜರಗಳು ಪತ್ತೆಯಾಗಿರುವ ಘಟನೆ ನಗರದ ಚಳ್ಳಕೆರೆ ಗೇಟ್ ಹತ್ತಿರ ನಡೆದಿದೆ. ದೊಡ್ಡಸಿದ್ದವ್ವನಹಳ್ಳಿ ಮೂಲದ ನಿವೃತ್ತ ಸಿವಿಲ್ ಇಂಜಿನಿಯರ್ ಜಗನ್ನಾಥ ರೆಡ್ಡಿ ಎಂಬುವವರಿಗೆ ಈ ಮನೆ ಸೇರಿದೆ.
ಈಗ ಪತ್ತೆಯಾಗಿರುವ ಅಸ್ಥಿಪಂಜರ ನೋಡಿದರೆ ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ಮೃತಪಟ್ಟಿರುವ ಶಂಕೆ ಇದೆ. ಈಗಾಗ್ಲೇ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಜಗನ್ನಾಥ ರೆಡ್ಡಿ ಸಂಬಂಧಿ ಪವನ್ ಕುಮಾರ್ ದೂರು ದಾಖಲಿಸಿದ್ದಾರೆ.
ಜಗನ್ನಾಥ ರೆಡ್ಡಿ(70), ಪತ್ನಿ ಪ್ರೇಮಾವತಿ(60), ಪುತ್ರಿ ತ್ರಿವೇಣಿ(42), ಪುತ್ರರಾದ ಕೃಷ್ಣಾರೆಡ್ಡಿ(40), ನರೇಂದ್ರ ರೆಡ್ಡಿ(38) ವಾಸವಾಗಿದ್ದರು. ಇನ್ನೋರ್ವ ಮಗ ಮಂಜುನಾಥ್ ರೆಡ್ಡಿ ಈ ಹಿಂದೆಯೇ ಮೃತಪಟ್ಟಿದ್ದ ಎಂದು ಸಂಬಂಧಿಕರು ಹೇಳುತ್ತಿದ್ದಾರೆ. 2019ರಿಂದ ಈ ಮನೆಯವರು ಯಾರಿಗೂ ಕಾಣಿಸಿಕೊಂಡಿಲ್ಲ. ಯಾರೊಂದಿಗೆ ಹೆಚ್ಚಿನ ಸಂಪರ್ಕ ಹೊಂದಿರಲಿಲ್ಲವಂತೆ. ಯಾರ ಮನೆಗೂ ಹೋಗುತ್ತಿರಲಿಲ್ಲ. ಯಾರನ್ನೂ ಮನೆಗೆ ಕರೆಯುತ್ತಿರಲಿಲ್ಲವಂತೆ.
ಈ ಹಿಂದೆ ಮನೆಯಿಂದ ಕೆಟ್ಟ ವಾಸನೆ ಬಂದಾಗ ಇಲಿ ಸತ್ತಿರಬಹುದು ಎಂದು ಸುಮ್ಮನಾಗಿದ್ದಾರೆ. ಇವರು ಯಾರೊಂದಿಗೆ ಸಂಪರ್ಕ ಇಟ್ಟುಕೊಳ್ಳದೆ ಇದ್ದಿದ್ದರಿಂದ ಈ ಮನೆ ಕಡೆ ಯಾರೂ ಗಮನ ಹರಿಸಿಲ್ಲ. ಈಗ ಪತ್ತೆಯಾಗಿರುವ ಅಸ್ಥಿಪಂಜರ ಯಾರದು? ಹೇಗೆ ಮೃತಪಟ್ಟರು? ಇಷ್ಟು ವರ್ಷವಾದರೂ ಯಾರ ಗಮನಕ್ಕೂ ಬರದೆ ಹೋಗಿದ್ದು ಹೇಗೆ? ಸಾವಿಗೆ ಏನು ಕಾರಣ? ಎಲ್ಲರೂ ಒಟ್ಟಿಗೆ ಮೃತಪಟ್ಟಿದ್ದಾ ಹೇಗೆ ಹಲವು ಪ್ರಶ್ನೆಗಳು ಉತ್ತರ ಸಿಗಬೇಕಿದೆ. ಈ ಘಟನೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಂತಿದೆ. ಪೊಲೀಸ್ ತನಿಖೆಯಿಂದಲೇ ಸತ್ಯಾಂಶ ಹೊರಗೆ ಬರಬೇಕಿದೆ.