ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪತ್ರಿಕೆಗಳಿಗೆ ಜಾಹೀರಾತು ನೀಡಿದೆ. ಅದರಲ್ಲಿ ನೆಹರೂ ಅವರ ಫೋಟೋ ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಬಿಜೆಪಿ ಜಾಹೀರಾತು ಮೇಲ್ಭಾಗದ ರೇಖಾಚಿತ್ರದಲ್ಲಿ ನೆಹರೂ ಅವರ ಚಿತ್ರವಿದೆ. ಕಾಂಗ್ರೆಸ್ ನವರು ಇಷ್ಟು ಬೇಗ ಅವರ ಮುಖ ಮರೆತು ಹೋದರೆ ಎಂದು ಕಾಲೆಳೆದಿದೆ. ಇನ್ನೊಂದು ಕಡೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ನಾವು ಉದ್ದೇಶಪೂರ್ವಕವಾಗಿಯೇ ನೆಹರು ಅವರ ಫೋಟೋ ಕೈ ಬಿಟ್ಟಿದ್ದೇವೆ. ನೆಹರೂ ದೇಶ ವಿಭಜನೆಗೆ ಕಾರಣರಾದವರು. ಮಹಾತ್ಮ ಗಾಂಧಿ ಮಾತನ್ನೇ ನೆಹರು ಕೇಳಲಿಲ್ಲ. ದೇಶ ವಿಭಜನೆಯ ಕರಾಳ ದಿನಾಚರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಒಂದು ಕಡೆ ಬಿಜೆಪಿ ರೇಖಾಚಿತ್ರದ ಮೂಲಕ ಫೋಟೋ ಹಾಕಿದ್ದೇವೆ ಎನ್ನುತ್ತಿದೆ. ಇನ್ನೊಂದು ಕಡೆ ಬೇಕೆಂದೇ ಕೈ ಬಿಟ್ಟಿದ್ದೇವೆ ಎನ್ನುತ್ತಿದ್ದಾರೆ. ಈ ರೀತಿಯಾಗಿ ಸಮರ್ಥನೆ ಮತ್ತು ಗೊಂದಲದ ಹೇಳಿಕೆಯಿಂದ ಬಿಜೆಪಿ ಏನು ಸಾಧಿಸಲು ಹೊರಟಿದೆ. ಇತಿಹಾಸ ತಿರುಚಲು ಸಾಧ್ಯವಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.