ಪ್ರಜಾಸ್ತ್ರ ಸುದ್ದಿ
ರಾಯಚೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ನಿಧನರಾಗಿ ಎರಡು ವರ್ಷ ಆಗುತ್ತಿದೆ. ಅಕ್ಟೋಬರ್ 29 ಅಪ್ಪು 2ನೇ ವರ್ಷದ ಪುಣ್ಯತಿಥಿ. ಹೀಗಾಗಿ ಅವರ ನೆನಪಿನಲ್ಲಿ ಅಭಿಮಾನಿಯೊಬ್ಬರು ಭತ್ತದ ಬೆಳೆಯಲ್ಲಿ ಪುನೀತ್ ಫೋಟೋ ಬಿಡಿಸಿ ಎಲ್ಲರ ಹುಬ್ಬೇರಿಸಿದ್ದಾರೆ.
ಸಿರಿವಾರ ತಾಲೂಕಿನ ಡೊಣ್ಣಿ ಕ್ಯಾಂಪಿನ ರೈತ ಸತ್ಯನಾರಾಯಣ ಅವರು 2 ಎಕರೆ ಜಮೀನಿನಲ್ಲಿ ಅಪ್ಪುವಿನ ಭಾವಚಿತ್ರಕ್ಕೆ ತಕ್ಕಂತೆ ಭತ್ತ ಬೆಳೆದಿದ್ದು, ಕರ್ನಾಟಕ ರತ್ನ ಎಂದು 40 ಅಡಿಯೊಳಗೆ ಬರೆದಿದ್ದಾರೆ. 90 ದಿನಗಳಲ್ಲಿ ಬೆಳೆಯುವ ಭತ್ತದಲ್ಲಿ ಅಪ್ಪು ಫೋಟೋ ಅದ್ಭುತವಾಗಿ ಮೂಡಿ ಬಂದಿದೆ.
ಇನ್ನು ರೈತ ಸತ್ಯನಾರಾಯಣ ಅವರು, ಜಪಾನ್ ತಂತ್ರಜ್ಞಾನದ ಶೈಲಿನಲ್ಲಿ ಭತ್ತ ಬೆಳೆಯುತ್ತಿದ್ದಾರೆ. ದೇಶದ ವಿವಿಧ ರಾಜ್ಯದ ಭತ್ತದ ತಳಿಗಳನ್ನು ತಂದು ಬೆಳೆಯುತ್ತಾರೆ. ಇದಕ್ಕೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದು, ತಾಲೂಕಿನಲ್ಲಿ ಮಾದರಿ ರೈತ ಎನಿಸಿಕೊಂಡಿದ್ದಾರೆ.