ಬಾಗಲಕೋಟೆ: ಪ್ರವಾಹದಿಂದ ತತ್ತರಿಸಿಹೋಗಿರುವ ಬಾಗಲಕೋಟೆ ಜಿಲ್ಲೆಯ ವಿವಿಧ ಕೇಂದ್ರಗಳಿಗೆ ಕೇಂದ್ರದ ಅಧ್ಯಯನ ತಂಡ ಇಂದು ಭೇಟಿ ನೀಡಿತು. ಮೂಲಸೌಕರ್ಯ ಸೇರಿದಂತೆ ಹಾನಿಯಾಗಿರುವ ಪ್ರತಿಯೊಂದರ ಅಂದಾಜು ಮಾಹಿತಿ ಪಡೆದುಕೊಳ್ಳಲಾಯ್ತು.
ಈ ವೇಳೆ ಮಾಧ್ಯಮದ ಜೊತೆ ಮಾತ್ನಾಡಿದ ಅಧಿಕಾರಿಗಳು, ಪ್ರವಾಹದಿಂದ ಜಿಲ್ಲೆಯ ಪ್ರಮುಖ ಬೆಳೆಗಳಾದ ಕಬ್ಬು, ದಾಳಿಂಬೆ ನಷ್ಟವಾಗಿದೆ. ಜನ ಜಾನುವಾರಿಗಳಿಗೆ ಅಪಾರ ಪ್ರಮಾಣದ ನಷ್ಟವಾಗಿದೆ. ಸೇತುವೆ, ರಸ್ತೆಗಳು ಸಾಕಷ್ಟು ಹಾಳಾಗಿವೆ. ಇನ್ನೊಂದು ಅಧ್ಯಯನ ತಂಡ ಭೇಟಿ ನೀಡಿದ ಬಳಿಕ, ಹಾನಿಯ ನಿಖರವಾದ ವರದಿಯನ್ನ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದ್ರು.
ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ, ರಬಕವಿ-ಬನಹಟ್ಟಿಯ ಅಸ್ಕಿ ಗ್ರಾಮ, ಮುಧೋಳ ತಾಲೂಕಿನ ಯಾದವಾಡ ಚಿಚಖಂಡಿ, ಬಾದಾಮಿ ತಾಲೂಕಿನ ಪಟ್ಟದಕಲ್ಲು ಹಾಗೂ ನಂದಿಕೇಶ್ವರಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಾಯ್ತು. ಜಮೀನುಗಳಿಗೆ ಭೇಟಿ ನೀಡಿ ಕಬ್ಬು, ದಾಳಿಂಬೆ ಸೇರಿದಂತೆ ಹಾಳಾದ ಬೆಳೆಗಳ ವೀಕ್ಷಣೆ ಮಾಡಲಾಯ್ತು. ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾಹಿತಿ ನೀಡಿದ್ರು. ಬಳಿಕ ಗದಗನತ್ತ ತಂಡ ತೆರಳಿತು. ಇದು ನಾಲ್ಕು ದಿನಗಳ ಅಧ್ಯಯನವಾಗಿದೆ.