ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮೂವರು ಯುವ ನಾಯಕರನ್ನು ಹೊರಗಿಡಲಾಗಿದೆ. ಹಿಂದುತ್ವ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಈ ಮೂವರನ್ನು ಕೈ ಬಿಡಲಾಗಿದೆ.
40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಅನೇಕರಿದ್ದಾರೆ. ಆದರೆ, ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಹಾಗೂ ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ವಿಜಯೇಂದ್ರ ಅವರನ್ನು ಕೈ ಬಿಡಲಾಗಿದೆ.
ಚುನಾವಣೆ ಸಂದರ್ಭದಲ್ಲಿ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ ಅವರಿಂದ ಯಾವುದೇ ವಿವಾದ ಆಗಬಾರದು ಅನ್ನೋ ಕಾರಣಕ್ಕೆ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಹೊರಗಿಟ್ಟು ಕೆಲವೊಂದಿಷ್ಟು ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಸೂಚಿಸಲಾಗಿದೆಯಂತೆ. ಇನ್ನು ಶಿಕಾರಿಪುರದ ಅಭ್ಯರ್ಥಿಯಾಗಿರುವ ಬಿ.ವೈ ವಿಜಯೇಂದ್ರಗೆ ಬೇರೆ ಕ್ಷೇತ್ರಗಳ ಕಡೆ ಹೆಚ್ಚು ಗಮನ ಹರಿಸಿದರೆ ಮೊದಲ ಬಾರಿ ಸ್ಪರ್ಧಿಸಿರುವ ಅವರ ಕ್ಷೇತ್ರದ ಚಿತ್ರಣದ ಮೇಲೆ ಪರಿಣಾಮ ಬೀರಬಹುದು ಎಂದು ಅವರನ್ನು ಕೈ ಬಿಡಲಾಗಿದೆಯಂತೆ.