ಸಿಂದಗಿ: ಭಯಾನಕ ಕರೋನಾದಿಂದಾಗಿ ಇಡೀ ದೇಶ ಸೈಲೆಂಟ್ ಆಗಿದೆ. ಏಪ್ರಿಲ್ 14ರ ತನಕ ಇಡೀ ಭಾರತ ಲಾಕ್ ಡೌನ್. ಉಳ್ಳವರಿಗೆ ಇದು ಸಂಕಷ್ಟವೆನಿಸದು. ಆದ್ರೆ, ಇಲ್ಲದವರಿಗೆ, ದಿನಗೂಲಿ ನಂಬಿ ಬದುಕಿದವರಿಗೆ, ಅಲೆಮಾರಿ ಬದುಕು ಸಾಗಿಸ್ತಾ ಊರಿಂದ ಊರು ಸುತ್ತಿಕೊಂಡು ಜೀವನ ಮಾಡುವವರಿಗೆ ಬಹುದೊಡ್ಡ ಹೊಡೆತ ಬಿದ್ದಿದೆ.
ಆರ್ಥಿಕವಾಗಿ ಸಬಲರಾಗಿರುವವರು ಹೇಗೋ ಜೀವನ ಮಾಡ್ತಾರೆ. ಇಲ್ಲದವರು ಏನು ಮಾಡ್ಬೇಕು. ಹೀಗಾಗಿ ಇದನ್ನ ಗಮನದಲ್ಲಿಟ್ಟುಕೊಂಡು ಪಟ್ಟಣದ ‘ಒಳಿತು ಮಾಡು ಮನುಷ್ಯ’ ಅನ್ನೋ ವಾಟ್ಸಪ್ ಗ್ರೂಪ್ ಸದಸ್ಯರು ಸಾಮಾಜಮುಖಿ ಕಾರ್ಯ ಮಾಡ್ತಿದ್ದಾರೆ. ಪಟ್ಟಣದಲ್ಲಿ ಯಾರೆಲ್ಲ ನಿರ್ಗತಿಕರು, ಅಲೆಮಾರಿ ಕುಟುಂಬಗಳು, ಕರೋನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೋ ಅವರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ.
ಪಟ್ಟಣದ 12ನೇ ವಾರ್ಡ್ ನಲ್ಲಿ ಸುಮಾರು 20 ಅಲೆಮಾರಿ ಕುಟುಂಬಗಳು ವಾಸವಾಗಿವೆ. ಇವರು ಇದೀಗ ಎಲ್ಲಿಯೂ ಹೋಗದ ಪರಿಸ್ಥಿತಿ. ಜೀವನದ ದುಡಿಮೆ ಬಂದ್ ಆಗಿದೆ. ಹೀಗಾಗಿ ಇಲ್ಲಿರುವ ಸುಮಾರು 65 ಜನ ಸದಸ್ಯರಿಗೆ ಈ ತಂಡ ಉಚಿತವಾಗಿ ಒಂದು ಮನೆಗೆ ಬೇಕಾಗುವ 5 ಕೆಜಿ ಅಕ್ಕಿ, 5 ಕೆಜೆ ಗೋಧಿ ಹಿಟ್ಟು, ರವೆ, 1 ಕೆಜಿ ಸಕ್ಕರಿ, ಟೀ ಪುಡಿ, ಉಪ್ಪು, ಕಾರದಪುಡಿ, ಎಣ್ಣೆ, ಬೆಳೆಕಾಳು, ಶೇಂಗಾ, ಬಿಸ್ಕೆಟ್, ಸೋಪು, ಟೂಥ್ ಪೇಸ್ಟ್, ಸೇರಿದಂತೆ ಅಗತ್ಯವಸ್ತುಗಳನ್ನ ಪೂರೈಕೆ ಮಾಡಲಾಗಿದೆ.
ಇನ್ನು ಇದೆ ರೀತಿ ಸನ್ ಸಿಟಿ ವ್ಯಾಪ್ತಿಯಲ್ಲಿರುವ ಸುಮಾರು 10 ಕುಟುಂಬಗಳಿಗೂ ಸಹ ಅಗತ್ಯವಸ್ತುಗಳನ್ನ ಪೂರೈಸಲಾಗಿದೆ. ಪಟ್ಟಣದ ಕೆಲ ವ್ಯಾಪಾರಸ್ಥರು ಸೇರಿಕೊಂಡು ಮಾಡಿರುವ ‘ಒಳಿತು ಮಾಡು ಮನುಷ್ಯ’ ವಾಟ್ಸಪ್ ಗ್ರೂಪ್ ನಿಂದ ಒಳ್ಳೆಯ ಕೆಲಸವಾಗ್ತಿದೆ. ಇದರಲ್ಲಿ ಗಣೇಶ ಪೈ, ಪ್ರಶಾಂತ ಪಟ್ಟಣಶೆಟ್ಟಿ, ಬಾಬು ಕಮತಗಿ, ಗುರುಪ್ರಸಾದ ಕಾಮತ, ಮಲ್ಲಿಕಾರ್ಜುನ ಅಲ್ಲಾಪುರ ಸೇರಿದಂತೆ ಅನೇಕರಿದ್ದಾರೆ.
ಇವರು ಬಳಿ ಇನ್ನು 1 ಸಾವಿರ ರೊಟ್ಟಿ, 1 ಕೆಜಿ ಅಕ್ಕಿ ಸೇರಿದಂತೆ ಇತರೆ ವಸ್ತುಗಳಿದ್ದು, ಯಾರಿಗಾದ್ರೂ ಕಷ್ಟದಲ್ಲಿರುವವರ ಬಗ್ಗೆ ಮಾಹಿತಿ ನೀಡಿದ್ರೆ ಇವರ ಜೊತೆಗೂಡಿ ಹಂಚಬಹುದು. ಇವರನ್ನ ಸಂಪರ್ಕಿಸಲು 9008008809 ಈ ನಂಬರ್ ಗೆ ಕಾಲ್ ಮಾಡಬಹುದು.