ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ವಿಜಯಪುರ: ಯುವ ಲೇಖಕ ಡಾ.ವಿನಯ ನಂದಿಹಾಳ 2022ನೇ ಸಾಲಿನ ಸೊ.ವೆಂ.ಆರಗ ವಿಮರ್ಶಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಿ.ಎಂ.ಶ್ರೀ ಪ್ರತಿಷ್ಠಾನದಿಂದ ಕೊಡಮಾಡುವ ಪ್ರಶಸ್ತಿಗೆ ಡಾ.ವಿನಯ ನಂದಿಹಾಳ ಅವರ ‘ಕಣ್ಣಂಚಿನ ಕಿಟಕಿ’ ಅನ್ನೋ ಲೇಖನಗಳ ಕೃತಿ ಆಯ್ಕೆ ಆಗಿದೆ.
ಬೆಂಗಳೂರಿನಲ್ಲಿರುವ ಎಂ.ವಿ.ಸೀ ಸಭಾಂಗಣದಲ್ಲಿ ಏಪ್ರಿಲ್ 29ರ ಸಂಜೆ 5ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ವೇಳೆ ಕವಯಿತ್ರಿ ರೂಪಾ ಹಾಸನ ಅವರಿಗೆ ಡಾ.ವಿಜಯಾ ಸುಬ್ಬರಾಜ್ ಗಣ್ಯಲೇಖಕಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಭೈರಮಂಗಲ ರಾಮೇಗೌಡ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಡಾ.ವಿನಯ ನಂದಿಹಾಳ ಪರಿಚಯ
ವಿಜಯಪುರ ಜಿಲ್ಲೆಯ ಜುಮನಾಳ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಅಧ್ಯಯನ ಮಾಡಿದವರು. ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಹಳಗನ್ನಡ ಸಾಹಿತ್ಯದಲ್ಲಿ ವೃತ್ತಿಗಳ ಸ್ವರೂಪ’ ಅನ್ನೋ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ.
ವಿವಿಧ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಡಾ.ದ.ರಾ ಬೇಂದ್ರೆ ಸ್ಮೃತಿ ಅಂತರ ಕಾಲೇಜು ಸ್ಪರ್ಧೆಯಲ್ಲಿ ಕಾವ್ಯ ಪುರಸ್ಕಾರ ಪಡೆದಿದ್ದಾರೆ. ಪ್ರಸ್ತುತ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.