ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ಶಾಸಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಇರುತ್ತಾರೆ. ಬಿಜೆಪಿಯಲ್ಲಿ ಕೆಲವರು ಬಾಯಿ ಬಿಟ್ಟರೆ ವಿವಾದಾತ್ಮಕ ಹೇಳಿಕೆ ನೀಡುವವರಿದ್ದಾರೆ. ಅದರಲ್ಲಿ ಸಿ.ಟಿ ರವಿ ಸಹ ಒಬ್ಬರು. ಇದೀಗ ಅದೆ ಅವರಿಗೆ ಮುಳ್ಳಾಗಲಿದೆ ಎಂದು ಹೇಳಲಾಗುತ್ತಿದೆ.
ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿಯುತ್ತಿದೆ. ಈ ಸಮುದಾಯದ ನಾಯಕರಿಗೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಹಾಗೂ ಅವರ ತಂಡ ಬಿಜೆಪಿ ಹೈಕಮಾಂಡ್ ಹೇಳಿದಂತೆ ನಡೆಯಬೇಕು ಅನ್ನೋ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ಸಮುದಾಯದ ಮುಖಂಡರು, ಸಂಘಟನೆಗಳು ಸಿ.ಟಿ ರವಿ ವಿರುದ್ಧ ತಿರುಗಿಬಿದ್ದಿವೆ.
ಇನ್ನು ಕಾಂಗ್ರೆಸ್ ಟ್ವೀಟ್ ಮಾಡಿ ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗೆ ತಳ್ಳಲಾಗುತ್ತಿದೆ. ಶೆಟ್ಟರ್ ಗೆ ಅವರ ಕ್ಷೇತ್ರದಲ್ಲೇ ಆಹ್ವಾನವಿಲ್ಲ. ಯಡಿಯೂರಪ್ಪಗೆ ಪ್ರಚಾರ ಸಮಿತಿಯ ನೇತೃತ್ವವಿಲ್ಲ. ಸೋಮಣ್ಣ ಅತಂತ್ರ. ಬೊಮ್ಮಾಯಿಯವರ ಹೆಸರೇ ಹೇಳುತ್ತಿಲ್ಲ. ಇದೆಲ್ಲವೂ ಜೋಶಿ, ಸಂತೋಷರ ತಂತ್ರವೇ ಎಂದು ಬರೆಯುವ ಮೂಲಕ ಕಾಲೆಳೆಯಲಾಗಿದೆ.
ಇನ್ನೊಂದು ಕಡೆ ಬಿಜೆಪಿ ಇದೊಂದು ಸುಳ್ಳು ಸುದ್ದಿ. ಕಾಂಗ್ರೆಸ್ ಸೃಷ್ಟಿಸಿರುವ ಸುಳ್ಳು ಎಂದು ಟ್ವೀಟ್ ಮಾಡಿದೆ. ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಇದೆಲ್ಲ ಸಾಧ್ಯವೆಂದು ಹೇಳುವ ಮೂಲಕ ಸಿ.ಟಿ ರವಿ ಹೇಳಿಕೆಯ ವಿವಾದಕ್ಕೆ ಕುರಿತಂತೆ ಟ್ವೀಟ್ ಮಾಡಿದೆ.