ಪ್ರಜಾಸ್ತ್ರ ಸುದ್ದಿ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಖ್ಯಾತಿಯ ವೆಂಕಟರಮಣೇಗೌಡ ಅವರ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗುರುವಾರ ಪ್ರಚಾರ ನಡೆಸಿದ್ದಾರೆ. ಹುಸ್ಕೂರು ಮೂಲಕ ತಮ್ಮ ಪ್ರಚಾರ ಆರಂಭಿಸಿದ್ದಾರೆ.
ಈ ವೇಳೆ ಮಾತನಾಡಿದ ದರ್ಶನ್, ನಾನು ಮೊದಲೇ ಹೇಳಿಬಿಡುತ್ತೇನೆ. ನಾನು ಯಾವುದೇ ಪಕ್ಷದ ಪರವಲ್ಲ. ನಾನು ವ್ಯಕ್ತಿ ಪರ. ಸುಮ್ಮಮ್ಮಗೆ ಬಿಜೆಪಿ ಟಿಕೆಟ್ ಸಿಗ್ಲಿಲ್ಲಂದರೆ ನಮಗೆ ಸಹಾಯ ಮಾಡಬೇಕು ಅಂತ ನರೇಂದ್ರಣ್ಣ ಮೊದಲೇ ಕೇಳಿದ್ದರು. ಮೊದಲು ಬಂದವರಿಗೆ ಮೊದಲು ಆದ್ಯತೆ ನೀಡಿದ್ದೇನೆ. ಸ್ಟಾರ್ ಚಂದ್ರು ಅವರಿಗೆ ಮತ ನೀಡಿ ಅಂತಾ ಹೇಳಿದರು.
ರೋಡ್ ಶೋ ವೇಳೆ ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಚಪ್ಪಾಳೆ, ಶಿಳ್ಳೆ, ಜೈಕಾರ ಹಾಕಿದರು. ಈ ವೇಳೆ ಶಾಸಕ ನರೇಂದ್ರಸ್ವಾಮಿ, ಕದಲೂರು ಉದಯ್ ಸಾಥ್ ನೀಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಮಂಡ್ಯ ಕಣದಲ್ಲಿದ್ದಾರೆ. ಬಿಜೆಪಿ ಟಿಕೆಟ್ ವಂಚಿತ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಇದುವರೆಗೂ ಎಲ್ಲೂ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಪಕ್ಷ ಹೇಳಿದ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಆದರೆ, ಅವರ ನಡೆ ಕುತೂಹಲ ಮೂಡಿಸಿದೆ.