ಏಷ್ಯಾದ ಬೆಳಕೆಂಬರು
ಭಾರತದ ಋಷಿಯೆಂಬರು
ಗೌತಮನೆಂಬರು ಬುದ್ದನೆಂಬರು
ಸಿದ್ದಾರ್ಥನೆಂಬರು ಹಲವು ನಾಮಗಳಿಂದ ಕರೆದರು
ಸೀಮೆಗಳಿಲ್ಲದ ನಿಸ್ಸೀಮ ಚೆಲುವ ಈತ
ಎಷ್ಟೊಂದು ಹೆಸರುಗಳೊಳಗಿದ್ದೂ
ತಾನಿಲ್ಲದವನಾಗಿ
ಎಷ್ಟೋ ಮೂರ್ತಿಗಳಲ್ಲಿದ್ದು ಇಲ್ಲದವನಾಗಿ
ಶಬ್ದಗಳೊಳಗಿದ್ದು ನಿಶ್ಯಬ್ದನಾಗಿ
ಹೃದಯಗಳಿಂದ ಹೃದಯಗಳಿಗೆ
ಕಾಲತೇಜದ ಜೊತೆಗೆ ಹರಿಯುವ ಈತ
ಬೆಳಕು ಎನ್ನಲೇ ಇಲ್ಲ ಈತ ಬೆಳಕಿಗೂ ಮೀರಿದವ
ಏಕೆಂದರೆ ಕತ್ತಲೆಗೂ ತಾಯಾದವ
ಹಂಚಿತಿನ್ನುವುದ ಕಲಿಸಿದ
ಹಿಂಸಿಸುವುದು ತಪ್ಪೆಂದು ತಿಳಿಸಿದ
ಆಡಿದ ಮಾತಿನಂತೆ ಬದುಕಿದ
ಎನಗೆ ವಿಷಕೊಟ್ಟವನ ಕ್ಷಮಿಸಿ ಉಳಿಸಿದ
ಈತನ ಯಾವ ಹೆಸರಿನಿಂದ ಕರೆಯುವುದು
ಆತ್ಮನ ನುಡಿಸಿದ ಮಮತೆಗೆ ಮಿಡಿಸಿದ
ದೇವರು ಎಂದರೆ ಈತನಿಗೆ ಅದು ಅತೀ ಚಿಕ್ಕಪದ
ಮಾತು ಹಿಡಿಯಲಾರದ ಈತನ
ಶಬ್ದಗಳು ಬಂದಿಸಲಾರದ ನಿಶ್ಯಬ್ದ ಸಖನ
ಮೂರ್ತಿಗಳೊಳಗೆ ಉಳಿಯದಾ ಮನೋನ್ಮಿಲನನ
ಆಗಸಕೆ ಮುಖಮಾಡಿ ಓ ಆತ್ಮ ಸಖ ಎಂದರೆ
ಎದೆಯೊಳಗೆ ಬಂದು ಆತ್ಮಸುಖವನೀವ
ಈತ ನನ್ನ ಸಖ ನನ್ನ ಆತ್ಮ ಬಂಧು