ಪ್ರಜಾಸ್ತ್ರ ಸುದ್ದಿ
ವಿಜಯಪುರ: ಎಳ್ಳ ಅಮವಾಸ್ಯೆ ಅಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ ಸಡಗರ ಮನೆ ಮಾಡುತ್ತೆ. ಇದೇ ಕಾರಣಕ್ಕೆ ದೂರದ ಊರಿನಲ್ಲಿದ್ದವರು ಸಹ ರಜೆ ಹಾಕಿ ಊರಿಗೆ ಬರುತ್ತಾರೆ. ಇತರೆ ಭಾಗದಲ್ಲಿ ದರ್ಶ ಅಥವ ಮಾರ್ಗಶಿರ ಅಮವಾಸ್ಯೆ ಅಂತಾನೂ ಕರೆಯುತ್ತಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಯೊಂದು ಹಬ್ಬವೂ ತನ್ನದೆಯಾದ ವೈಶಿಷ್ಯ ಹೊಂದಿದೆ. ಅದೆಲ್ಲೂ ರೈತಾಪಿ ವರ್ಗ, ಭೂಮಿ, ದನಕರುಗಳಿಗೆ ಸಂಬಂಧ ಬೆಸೆದುಕೊಂಡಿರುತ್ತೆ. ಇದೇ ರೀತಿ ಎಳ್ಳ ಅಮವಾಸ್ಯೆ ಸಹ ಭೂಮಿಯನ್ನು ನಮಿಸುವುದಾಗಿದೆ. ಒಳ್ಳೆಯ ಬೆಳೆ ಬಂದು ನಮ್ಮನ್ನು ಕಾಪಾಡಿಲಿ ಎಂದು ಪೂಜೆ ಮಾಡಿ, ಹೊಲದಲ್ಲಿ ಚರಗ(ನೈವೇದ್ಯ) ಚೆಲ್ಲುತ್ತಾರೆ.
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಜೋಳ ಬೆಳೆಯುತ್ತಾರೆ. ಪುರಾಣದ ಪ್ರಕಾರ ಕೌರವರು, ಪಾಂಡವರು ಸಹ ಜೋಳ ಬಿತ್ತಿದ್ದರಂತೆ. ಅವರ ನೆನಪು ಹಾಗೂ ಭೂಮಿಯ ಫಲವತ್ತತೆಯನ್ನು ಕಾಪಾಡುವ ರೈತನ ಮಿತ್ರವಾಗಿರುವ ಎರೆಹುಳಗಳಿಗೆ ಆಹಾರವಾಗುತ್ತೆ ಎನ್ನುವ ಕಾರಣಕ್ಕೆ ಹೊಲದ ತುಂಬ ಚರಗ ಚೆಲ್ಲಲಲಾಗುತ್ತೆ.
ಪೂಜೆಯ ಬಳಿಕ ಕುಟುಂಬಸ್ಥರು, ಬಂಧು ಮಿತ್ರರು ಕೂಡಿಕೊಂಡು ಜೋಳದ ರೆಟ್ಟಿ, ಸಜ್ಜಿ ರೊಟ್ಟಿ, ಶೇಂಗಾ ಹೋಳಿಗೆ, ಹೂರಣದ ಹೋಳಿಗೆ, ಪುಂಡಿ ಪಲ್ಯ, ಕಡ್ಲಿ ಪಲ್ಯ, ಎಣ್ಣಗಾಯಿ, ಶೇಂಗಾ ಹಿಂಡಿ, ಮೊಸರು ಸೇರಿದಂತೆ ವಿವಿಧ ರೀತಿಯ ಭಕ್ಷಗಳನ್ನು ಸವಿಯುತ್ತಾರೆ. ಕಡ್ಲಿಕಾಯಿ ತಿಂದು ಖುಷಿ ಪಡುತ್ತಾರೆ. ಇದಾದ ಎರಡ್ಮೂರು ದಿನಗಳಲ್ಲೇ ಬರುವ ಸಂಕ್ರಮಣ ಹಬ್ಬದಲ್ಲಿ ಸೀತ್ನಿ(ಎಳೆ ಜೋಳದ ಕಾಳುಗಳು) ಸುಟ್ಟುಕೊಂಡು ತಿನ್ನುತ್ತಾರೆ. ಮುಂದೆ ಜೋಳ, ಕಡ್ಲಿಕಾಳಿನ ರಾಶಿ ಮಾಡಲಾಗುತ್ತೆ.