ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. 136 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ, ಜೆಡಿಎಸ್ ಗೆ ಭಾರೀ ಹೊಡೆತ ನೀಡಿದೆ. ಚುನಾವಣೆಯ ವೇಳೆ ಒಗ್ಗಟ್ಟಿನ ಮಂತ್ರ ಜಪಿಸಿದ್ದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಈಗ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಆಗುವ ನಾಯಕ ಸಿಎಂ ಆಗುತ್ತಾರೆ ಅನ್ನೋದು ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗ. ಆದರೆ, ರಾಜಕೀಯ ಪಡಸಾಲೆಯಲ್ಲಿ ಹೈಕಮಾಂಡ್ ನಾಯಕರ ತೀರ್ಮಾನ, ಜಾತಿ ಪ್ರಾಬಲ್ಯ ಸೇರಿ ಅನೇಕ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಒಕ್ಕಲಿಗ ನಾಯಕರು, ಮುಖಂಡರು, ಸ್ವಾಮೀಜಿಗಳ ಒತ್ತಡ ಒಂದ್ಕಡೆ ನಡೆದಿದೆ.
ಸಿದ್ದರಾಮಯ್ಯರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಬೇಕು ಎಂದು ಕುರುಬ ಸಮುದಾಯ ಸೇರಿ ಅವರ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಡಿಕೆಶಿ ಸಿಬಿಐ, ಐಟಿ, ಇಡಿ ಪ್ರಕರಣಗಳನ್ನು ಎದುರಿಸಬೇಕು. ಒಂದು ಸಿಎಂ ಆದ ಮೇಲೆ ಸಿಬಿಐ, ಇಡಿ ವಿಚಾರಣೆ ಎಂದು ದೆಹಲಿಗೆ ಪದೆಪದೆ ಹೋಗುವುದರಿಂದ ಪಕ್ಷದ ಮೇಲೆ ಹೊಡೆತ ಬೀಳುತ್ತೆ. ಹೀಗಾಗಿ 50:50 ಎನ್ನಲಾಗುತ್ತಿದೆ. ಮೊದಲ ಹಂತದಲ್ಲಿ ಸಿದ್ದರಾಮಯ್ಯ ಸಿಎಂ, ಮೂವರು ಡಿಸಿಎಂ. 2ನೇ ಹಂತದಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಅನ್ನೋ ಚರ್ಚೆ ನಡೆದಿದೆ. ಈ ಇಬ್ಬರು ನಾಯಕರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.