ಪ್ರಜಾಸ್ತ್ರ ಸುದ್ದಿ
ಧಾರವಾಡ: ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆಯೇ ಪ್ರಕರಣ ದಾಖಲಾಗಿದೆ. ಅರಣ್ಯ ಇಲಾಖೆಯ ಧಾರವಾಡ ವಿಭಾಗದ ಬೀಟ್ ಫಾರೇಸ್ಟರ್ ಶಿವಾನಂದ ಕೊಂಡಿಕೊಪ್ಪ ಮತ್ತು ಡಿಆರ್ ಎಫ್ಓ ಅವಿನಾಶ ರಣಕಾಂಬೆ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಈ ಇಬ್ಬರು ಸಿಬ್ಬಂದಿ ಧಾರವಾಡದ ಕಲಕೇರಿ ಮೀಸಲು ಅರಣ್ಯ ಪ್ರದೇಶದಲ್ಲಿ ಇತ್ತಿಚೇಗೆ ಅಕ್ರಮವಾಗಿ ಪ್ರವೇಶ ಮಾಡಿದ್ದರು ಎಂದು ಧಾರವಾಡ ವಲಯದ ಕಲಕೇರಿ ಶಾಖೆಯ ಡಿಆರ್ ಎಫ್ಓ ಪರಶುರಾಮ ಮನಕೂರ ಎಂಬುವರ ದೂರು ನೀಡಿದ್ದರು. ಅವರ ದೂರಿನ ಮೇರೆಗೆ, ಧಾರವಾಡ ವಲಯ ಅರಣ್ಯ ಅಧಿಕಾರಿ ಪ್ರದೀಪ ಪವಾರ, ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಸೆನ್ 24ಸಿ/2 ಅಡಿ ಡಿಸೆಂಬರ್ 5ರಂದು ಎಫ್ಐಆರ್ ದಾಖಲಿಸಿದ್ದಾರೆ.
ಅರಣ್ಯ ಕಾಯುವ ಸಿಬ್ಬಂದಿಯ ಮೇಲೆಯೇ ಅಧಿಕಾರಿಗಳು ಅಕ್ರಮ ಅರಣ್ಯ ಪ್ರವೇಶದ ಪ್ರಕರಣ ದಾಖಲಿಸಿರುವುದು ದುರಂತವೇ ಸರಿ. ಈ ಪ್ರಕರಣ ಅರಣ್ಯ ಇಲಾಖೆಯ ಇತಿಹಾಸದಲ್ಲಿಯೇ ಪ್ರಥಮವಾಗಿದೆ. ಈ ಕುರಿತು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ.
– ವಿಠ್ಠಲ ಜೋನಿ, ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕ ಮತ್ತು ಅರಣ್ಯ ವೀಕ್ಷಕರ ಸಂಘದ ರಾಜ್ಯಾಧ್ಯಕ್ಷ
ನಿಜವಾಗಿಯೂ ಈ ಘಟನೆಯ ಒಳ ತಿರುವು ಏನು? ಉದ್ದೇಶಪೂರ್ವಕವಾಗಿಯೇ ಎಫ್ಐಆರ್ ದಾಖಲಾಯಿತಾ? ಅಥವಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮುಸುಕಿನ ಗುದ್ದಾಟ ನಡೆದಿದೆಯಾ? ಎಂಬುದರ ಸಮಗ್ರ ಮಾಹಿತಿ ಸಧ್ಯದಲ್ಲಿಯೇ ಪ್ರಜಾಸ್ತ್ರ ವೆಬ್ ಪತ್ರಿಕೆ ಬಯಲು ಮಾಡಲಿದೆ.