ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಮದ್ಯಪ್ರಿಯರ ಹೋರಾಟ ಸಂಘದಿಂದ ಸುವರ್ಣಸೌಧದ ಹತ್ತಿರ ಗುರುವಾರ ಪ್ರತಿಭಟನೆ ನಡೆಸಲಾಗುತ್ತಿದೆ. ಕಳೆದ 9 ದಿನಗಳಿಂದ ಗಾರ್ಡನ್ ಹತ್ತಿರದ ಟೆಂಟ್ ಬಳಿ ಪ್ರತಿಭಟನೆ ನಡೆಸಲಾಗುತ್ತಿದೆ.
ಕಾರ್ಮಿಕ ಮಂಡಳಿ ಅಡಿಯಲ್ಲಿ ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಕಲ್ಯಾಣ ನಿಧಿಗೆ ವಾರ್ಷಿಕ ಶೇ.10ರಷ್ಟು ಹಣ ವರ್ಗಾಯಿಸಬೇಕು. ಮದ್ಯಪ್ರಿಯರು ಅನಾರೋಗ್ಯಕ್ಕೆ ಒಳಗಾದರೆ ಸರ್ಕಾರವೇ ಸಂಪೂರ್ಣ ಬಿಲ್ ಭರಿಸಬೇಕು. ಮದ್ಯಪಾನ ಪ್ರಿಯರ ಪ್ರತಿಭಾನ್ವಿತ ಮಕ್ಕಳಿಗೆ ಮಾಶಾಸನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಕೇಳಿದರು. ನಮ್ಮನ್ನು ಕುಡುಕರು ಎಂದು ಕರೆದು ಅವಮಾನ ಮಾಡದೆ ಮದ್ಯಪ್ರಿಯರು ಎನ್ನಬೇಕು. ಎಂಆರ್ ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡದಂತೆ ಅಬಕಾರಿ ಅಧಿಕಾರಿಗಳಿಗೆ ಸೂಚಿಸಬೇಕು. ನಿಗಮ ಮಂಡಳಿ ಸ್ಥಾಪಿಸಬೇಕು. ಮದುವೆಯಾಗಲು 2 ಲಕ್ಷ ಪ್ರೋತ್ಸಾಹ ಧನ, ಮೃತಪಟ್ಟರೆ 10 ಲಕ್ಷ ರೂಪಾಯಿ ವಿಮೆ ನೀಡಬೇಕು ಎಂದರು. ಇಲಾಖೆಯಿಂದ ಏನು ಮಾಡಲು ಸಾಧ್ಯವೋ ಅಷ್ಟು ಮಾಡುತ್ತೇವೆ ಎಂದು ಹೇಳಿ ಸಚಿವರು ಅಲ್ಲಿಂದ ತೆರಳಿದರು. ಸಂಘದ ರಾಜ್ಯಾಧ್ಯಕ್ಷ ವೆಂಕಟೇಶಗೌಡ ಬೋರೇಹಳ್ಳಿ ಸೇರಿ ಸದಸ್ಯರು ಹಾಜರಿದ್ದರು.