ದೇವರಹಿಪ್ಪರಗಿ: ವಿಜಯಪುರ ಜಿಲ್ಲೆಯಲ್ಲಿ ಎರಡು ಕಡೆ ಗೋಶಾಲೆಗಳನ್ನ ತೆರೆಯಲಾಗಿದೆ. ಒಂದು ಸಿಂದಗಿ ತಾಲೂಕು ವ್ಯಾಪ್ತಿಗೆ ಒಳಪಡುವಂತೆ ದೇವರಹಿಪ್ಪರಗಿಯಲ್ಲಿ. ಇನ್ನೊಂದು ಇಂಡಿ ತಾಲೂಕಿನ ತಡವಲಿಗಾದಲ್ಲಿ. ದೇವರಹಿಪ್ಪರಗಿಯಲ್ಲಿರುವ ಗೋಶಾಲೆಯಲ್ಲಿ ಎತ್ತು, ಆಕಳು, ಎಮ್ಮೆ, ಕರುಗಳು ಸೇರಿದಂತೆ ಸುಮಾರು 600-650 ಜಾನುವಾರುಗಳಿವೆ.
ಮುಳಸಾವಳಗಿ, ಇಂಗಳಗಿ, ದೇವರಹಿಪ್ಪರಗಿ, ನಿವಾಳಕೋಡ, ಪಡಗಾನೂರ, ಬೊಮ್ಮನಜೋಗಿ ಹಾಗೂ ಹರನಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ರಾಸುಗಳು ಇಲ್ಲಿ ಆಶ್ರಯ ಪಡೆದಿವೆ. ದನಕರುಗಳಿಗೆ ಪ್ರತಿನಿತ್ಯ ಮೇವು ಸಿಗ್ತಿದೆ. ನೀರಿನ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ರೈತರೆ ಹೇಳುವಂತೆ ತಮ್ಮ ಜಾನುವಾರುಗಳಿಗೆ ಯಾವುದೇ ರೀತಿಯ ತೊಂದ್ರೆಯಿಲ್ಲ.
ಒಂದು ದನಕ್ಕೆ 18 ಕೆಜಿ ಮೇವು, ಕರುವಿಗೆ 5 ಕೆಜಿ ಮೇವು ನೀಡಲಾಗ್ತಿದೆ. ಆದ್ರೆ, ಇದು ಸಾಲುವುದಿಲ್ಲ. ಇನ್ನು ಸ್ವಲ್ಪ ಹೆಚ್ಚಿಗೆ ಮಾಡಬೇಕು ಅನ್ನೋ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಇಲ್ಲಿನ ಡಾಕ್ಟರ್ ಸೇರಿದಂತೆ ಸಿಬ್ಬಂದಿ ಸಹ ಉತ್ತಮವಾದ ಕೆಲಸ ಮಾಡಿಕೊಂಡು ಹೋಗ್ತಿದ್ದಾರೆ. ಇವರ ದೂರು ಇರುವುದು, ಕೆಲವರು ದನ ಕರುಗಳನ್ನ ಸಂಜೆ ತೆಗೆದುಕೊಂಡು ಹೋಗ್ತಾರೆ. ಕೆಲವರು ಬೆಳಗ್ಗೆ ತೆಗೆದುಕೊಂಡು ಹೋಗ್ತಾರೆ. ಹಾಲು ಕರೆಯಬೇಕು, ಹೊಲಗಳಲ್ಲಿ ಉಳುಮೆ ಮಾಡಬೇಕೆಂದು ತೆಗೆದುಕೊಂಡು ಹೋಗ್ತಾರೆ. ಈ ಬಗ್ಗೆ ನಮ್ಗೆ ಗಮನ ಹರಿಸಲು ಆಗ್ತಿಲ್ಲ ಅನ್ನೋದು. ಉಳಿದಂತೆ ಎಲ್ಲವೂ ಚೆನ್ನಾಗಿದ್ದು ಸರ್ಕಾರದ ಕಾರ್ಯದ ಬಗ್ಗೆ ರೈತರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.