ಬಾಗಲಕೋಟೆ: ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ 11 ತಿಂಗಳ ಕೂಸು ಸಾವನ್ನಪ್ಪಿದ್ದ ಕರುಣಾಜನಕ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಿಲ್ಲೆಯ ತಮದಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತ ಮಗುವನ್ನ ಅಚಲ್ ಎಂದು ಗುರುತಿಸಲಾಗಿದೆ. ತಾಯಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರಂತರ ಮಳೆಯಿಂದಾಗಿ ಮನೆಯ ಗೋಡೆಗಳು ನೆನದಿದ್ದು, ಇಂದು ಬೆಳಗ್ಗೆ ಕುಸಿದಿವೆ. ಇದರ ಪರಿಣಾಮ ನಿದ್ದೆಯಲ್ಲಿದ್ದ ಮಗು ಮೃತಪಟ್ಟಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಶಾಸಕ ಸಿದ್ದು ಸವದಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ರು. ಮನೆಯ ಮೇಲ್ಛಾವಣಿ ಕುಸಿದಿರುವುದಕ್ಕೆ 5 ಲಕ್ಷ ರೂಪಾಯಿ, ಮಗುವಿನ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದ್ದಾರೆ. ಇದರ ಜೊತೆಗೆ ತಾಯಿಯ ಚಿಕತ್ಸೆಯ ವೆಚ್ಚವನ್ನ ಸರ್ಕಾರ ನೋಡಿಕೊಳ್ಳುತ್ತದೆ ಅಂತಾ ಹೇಳಿದ್ದಾರೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.