ಕಲಬುರಗಿ: ಸಿಎಂ ಬಿ.ಎಸ್ ಯಡಿಯೂರಪ್ಪನವರು ಹೈದ್ರಾಬಾದ್ ಕರ್ನಾಟಕ ಭಾಗವನ್ನ ಕಲ್ಯಾಣ ಕರ್ನಾಟಕವೆಂದು ಅಧಿಕೃತವಾಗಿ ಘೋಷಣೆ ಮಾಡಿದ್ರು. ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ, ಅಧಿಕೃತವಾಗಿ ‘ಕಲ್ಯಾಣ ಕರ್ನಾಟಕ’ ಎಂದು ಹೆಸರು ಘೋಷಣೆ ಮಾಡಿದ್ರು.
ಕಲ್ಯಾಣ ಕರ್ನಾಟಕ ಉತ್ಸವದ ನಿಮಿತ್ಯ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಯ್ತು. ಈ ವೇಳೆ ಸಿಎಂಗೆ ಗಾರ್ಡ್ ಆಫ್ ಹಾನರ್ ಗೌರವ ಸಲ್ಲಿಸಲಾಯ್ತು. ಬಳಿಕ ಮಾತ್ನಾಡಿದ ಸಿಎಂ, ಕಲ್ಯಾಣ ಕರ್ನಾಟಕ ನಾಮಕರಣಕ್ಕೆ ಬಸವರಾಜ ಪಾಟೀಲ ಸೇಡಂ ಅವರ ಪ್ರಯತ್ನಕ್ಕೆ ಶಾಸಕರ ಸಹಯೋಗ ನೀಡಿದೆ. ಇದನ್ನ ಅಧಿಕೃತ ಘೋಷಣೆ ಮಾಡಲು ನನ್ಗೆ ಅವಕಾಶ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ ಅಂತಾ ಹೇಳಿದ್ರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಹೇಳಿದ್ದಾರೆ. ಅಲ್ದೇ 371ಜೆ ಪರಿಣಾಮಕಾರಿಯಾಗಿ ಜಾರಿಗೆ ತರುವುದಾಗಿ ತಿಳಿಸಿದ್ರು.
ಕಲ್ಯಾಣ ಕರ್ನಾಟಕ ಹೆಸರು ಘೋಷಣೆಯಿಂದ ಕಲಬುರಗಿ, ರಾಯಚೂರು, ಬಳ್ಳಾರಿ, ಬೀದರ, ಕೊಪ್ಪಳ ಸೇರಿದಂತೆ ಆರು ಜಿಲ್ಲೆಗಳ ಜನರಿಗೆ ಸಂತೋಷವಾಗಿದೆ. ಈ ಎಲ್ಲ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಇಷ್ಟು ದಿನ ಸೆಪ್ಟೆಂಬರ್ 17ರಂದು ಹೈದ್ರಾಬಾದ್ ವಿಮೋಚನಾ ದಿನಾಚರಣೆ ಮಾಡಲಾಗ್ತಿತ್ತು. ಈ ಬಾರಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಮಾಡಲಾಗ್ತಿದೆ.