ಪ್ರಜಾಸ್ತ್ರ ಸುದ್ದಿ:
ವಿಜಯಪುರ: ಸಿಂದಗಿಯ ಹಿರಿಯ ಪತ್ರಕರ್ತ ಮುರಗೇಶ ಹಿಟ್ಟಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಸಂತಾಪ ಸೂಚಿಸಲಾಯಿತು. ನಗರದ ಪತ್ರಿಕಾ ಭವನದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಮುರಗೇಶ ಹಿಟ್ಟಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಟಿ.ಚೂರಿ ಮಾತನಾಡಿ, ಪತ್ರಕರ್ತ ಮುರುಗೇಶ ಹಿಟ್ಟಿ ಅವರು ಸ್ನೇಹಜೀವಿಯಾಗಿದ್ದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರ ಅಕಾಲಿಕ ನಿಧನ ತುಂಬಾ ಬೇಸರವನ್ನುಂಟು ಮಾಡಿದೆ ಎಂದರು.
ಉಪಾಧ್ಯಕ್ಷ ಇಂದುಶೇಖರ ಮಣೂರ ಮಾತನಾಡಿ, ಪತ್ರಕರ್ತ ಮುರುಗೇಶ ಹಿಟ್ಟಿ ಅವರು ಅಜಾತಶತ್ರು ಆಗಿದ್ದರು. ಅವರಿಗೆ ಯಾರೂ ವಿರೋಧಿಗಳೇ ಇರಲಿಲ್ಲ. ಅವರನ್ನು ಕಳೆದುಕೊಂಡು ತುಂಬಾ ನೋವಾಗಿದೆ ಎಂದರು. ಸಲಹಾ ಸಮಿತಿ ಸದಸ್ಯ ರಾಜು ಪಾಟೀಲ, ಕಾನಿಪ ರಾಜ್ಯ ಸಮಿತಿ ಸದಸ್ಯ ಕೆ.ಕೆ.ಕುಲಕರ್ಣಿ ಮಾತನಾಡಿ, ಕಾರ್ಯನಿರತ ಪತ್ರಕರ್ತರ ಸಂಘದ ಸಕ್ರಿಯ ಸದಸ್ಯರಾಗಿದ್ದ ಮುರುಗೇಶ ಹಿಟ್ಟಿ ಅವರ ನಿಧನದಿಂದ ಪತ್ರಕರ್ತರ ಸಂಘಕ್ಕೆ ಹಾನಿಯಾದಂತಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಫಿರೋಜ್ ರೋಜಿನದಾರ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿ ಮೆಂಡೇಗಾರ, ಸುನೀಲ ಗೋಡೆನ್ನವರ, ಆಸೀಫ್ ಬಾಗವಾನ, ಸುನೀಲ ಕಾಂಬಳೆ, ನಾಮನಿರ್ದೇಶಿತ ಸದಸ್ಯರಾದ ಗುರು ಗದ್ದನಕೇರಿ, ನವೀದ ಅಂಜುಮ ಮಮದಾಪೂರ, ಸದಸ್ಯರಾದ ಅರವಿಂದ ಬಿರಾದಾರ, ಡಿ.ಎಸ್.ಮೇತ್ರಿ, ಸುನೀಲ ಭಾಸ್ಕರ ಹಾಗೂ ಇತರರು ಉಪಸ್ಥಿತರಿದ್ದರು.