ಸಿಂದಗಿ: ತರಕಾರಿ ಹಾಗೂ ಹಣ್ಣು ಮಾರುಕಟ್ಟೆ ನಿರ್ಮಿಸದಿರುವುದನ್ನ ಖಂಡಿಸಿ ಜುಲೈ 20ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ವ್ಯಾಪಾರಸ್ಥರು ಮುಂದಾಗಿದ್ದಾರೆ. ಡಾ.ಎಪಿಜೆ ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ, ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದೆ.
ಜುಲೈ 20ರಂದು ಟಿಪ್ಪು ಸುಲ್ತಾನ್ ಸರ್ಕಲ್ ನಿಂದ ಮೆರವಣಿಗೆ ಆರಂಭಿಸಿ, ಸ್ವಾಮಿ ವಿವೇಕಾನಂದ ಸರ್ಕಲ್ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ತಲುಪುವುದು. ಬಳಿಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಮರಳಿ ಟಿಪ್ಪು ಸುಲ್ತಾನ್ ಸರ್ಕಲ್ ತಲುಪುವುದು ಅಂತಾ ಹೇಳಿದ್ದಾರೆ.
ತುಂಬಾ ಸಣ್ಣದಾದ ಜಾಗದಲ್ಲಿ ತರಕಾರಿ, ಹಣ್ಣುಗಳನ್ನ ಇಟ್ಟುಕೊಂಡು ಮಾರಾಟ ಮಾಡಲಾಗ್ತಿದೆ. ಇದರ ಸುತ್ತಮುತ್ತ ಇತರೆ ಅಂಗಡಿಗಳಿವೆ, ಸ್ಕೂಲ್ ಗಳಿವೆ, ಬೃಹತ್ ಚರಂಡಿ ಇದೆ, ಸಾರ್ವಜನಿಕ ಶೌಚಾಲಾಯವಿದೆ. ಇದ್ರಿಂದಾಗಿ ಇಡೀ ಜಾಗ ಕೊಳಚೆಯಿಂದ ಕೂಡಿದೆ. ಮಳೆಯಾದ್ರೆ ಈ ಜಾಗ ಸಂಪೂರ್ಣವಾಗಿ ಕೆಸರಿನಿಂದ ತುಂಬಿಕೊಳ್ಳುತ್ತೆ. ಕಾಲಿಗೆ ಹಾಕಿಕೊಳ್ಳುವ ಚಪ್ಪಲಿ ಗ್ಲಾಸ್ ಒಳಗಡೆಯಿದ್ರೆ ಹೊಟ್ಟೆ ತುಂಬಿಸುವ ತರಕಾರಿ ಕೊಳಚಿಯಲ್ಲಿದೆ ಅಂತಾ ತುಂಬಾ ಮಾರ್ಮಿಕವಾಗಿ ತಮ್ಮ ನೋವನ್ನ ಆಕ್ರೋಶದ ರೂಪದಲ್ಲಿ ಹೊರ ಹಾಕಿದ್ರು.
ಬಾಗೇವಾಡಿ, ದೇವರಹಿಪ್ಪರಗಿ, ಜೇವರಗಿ, ಬಾಗಲಕೋಟೆಯಲ್ಲಿ ತರಕಾರಿ ಮಾರುಕಟ್ಟೆ ಇದೆ. ಆದ್ರೆ, ನಮ್ಗೆ ಯಾವುದೇ ಸೂಕ್ತ ಮಾರುಕಟ್ಟೆಯಿಲ್ಲ. ಇದಕ್ಕಾಗಿ 2-3 ಕಡೆ ಜಾಗ ಗುರುತಿಸಲಾಗಿದ್ರೂ, ಯಾವುದಕ್ಕೂ ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ತಿಲ್ಲ. ಈ ಬಗ್ಗೆ ಈ ಹಿಂದಿನ ಶಾಸಕರಿಗೆ, ಈಗಿರುವ ಸಚಿವರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ದಿನಕ್ಕೆ 10 ಲಕ್ಷ ರೂಪಾಯಿ ವಹಿವಾಟು ನಡೆಯುತ್ತೆ. ಅದೆಲ್ಲವನ್ನೂ ಬಿಟ್ಟು ನಮ್ಮ ಬದುಕಿಗಾಗಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದೇವೆ ಅಂತಾ ತಿಳಿಸಿದ್ರು.
ನಾಳೆಯಿಂದ ತರಕಾರಿ ತರಬೇಡಿ ಎಂದು ರೈತರಿಗೆ ಹೇಳಿದ್ದೇವೆ. ಅಲ್ದೇ, ನಮ್ಮ ಹೋರಾಟದ ಸಲುವಾಗಿ ರೈತರಲ್ಲಿ ಮನವಿ ಮಾಡಿಕೊಂಡಿದ್ದೇವೆ. ತಾಲೂಕು ರೈತ ಸಂಘ, ವಕೀಲರ ಸಂಘ ಸೇರಿದಂತೆ ಸುಮಾರು 10 ಸಂಘಟನೆಗಳು ನಮಗೆ ಬೆಂಬಲ ನೀಡಿದ್ದು, ಜುಲೈ 20ರಂದು ಬೃಹತ್ ಪ್ರತಿಭಟನೆ ನಡೆಸುತ್ತೇವೆ. ನಮ್ಗೆ ನ್ಯಾಯ ಸಿಗುವ ತನಕ ಸಂಪೂರ್ಣವಾಗಿ ತರಕಾರಿ ಹಾಗೂ ಹಣ್ಣು ವ್ಯಾಪಾರ ಬಂದ್ ಮಾಡ್ತಿದ್ದೇವೆ. ಭಾನುವಾರ ಸಹ ಸಿಂದಗಿಯಲ್ಲಿ ಯಾವುದೇ ತರಕಾರಿ ವ್ಯಾಪಾರ ನಡೆಯುವುದಿಲ್ಲ ಅಂತಾ ಇದೆ ವೇಳೆ ತಿಳಿಸಲಾಯ್ತು.
ಡಾ.ಎಪಿಜೆ ಅಬ್ದುಲ್ ಕಲಾಂ ತರಕಾರಿ ಮತ್ತು ಹಣ್ಣು ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಸೈಪನ ನಾಟೀಕಾರ, ಉಪಾಧ್ಯಕ್ಷ ಅಲ್ಲೀಸಾಬ ಮುರ್ತೂರ, ಸಹಕಾರ್ಯದರ್ಶಿ ದಸ್ತಗೀರಿಸಾಬ, ಖಜಾಂಚಿ ಬಂದೇನವಾಜ ಶಾಪೂರ, ಸದಸ್ಯರಾದ ಇಕ್ಬಾಲಸಾಬ ತಲಕಾರಿ, ಬಸೀರಸಾಬ, ರಾಜಅಹ್ಮದ ಸೇರಿದಂತೆ ಅನೇಕರು ಭಾಗವಹಿಸಿದ್ರು.