ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೋಕಸಭಾ ಕ್ಷೇತ್ರದ ವಿಚಾರವಾಗಿ ಕಾಂಗ್ರೆಸ್ ನಲ್ಲಿ ದೊಡ್ಡ ಜಟಾಪಟಿ ನಡೆದಿದೆ. ಸಚಿವ ಕೆ.ಹಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದ್ದಿದ್ದು, ಇದರ ವಿರುದ್ಧ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಿಡಿದೆದ್ದಿದ್ದು ಬಲಗೈ ಸಮುದಾಯದವರಿಗೆ ಕೊಡಿ ಎಂದಿದ್ದಾರೆ.
ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಡಗೈ ಸಮುದಾಯದವರಿಗೆ ಟಿಕೆಟ್ ವಿಚಾರಕ್ಕೆ ಒಪ್ಪಿಗೆ ಸಿಕ್ಕಿದೆ. ಆದ್ರೆ, ಯಾವುದೇ ಕಾರಣಕ್ಕೂ ಮುನಿಯಪ್ಪ ಕುಟುಂಬಸ್ಥರಿಗೆ ಟಿಕೆಟ್ ನೀಡಬಾರದು ಎಂದಿದ್ದಾರೆ.
ಪರಿಶಿಷ್ಟ ಜಾತಿಗೆ ಮೀಸಲಾದ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಬಲಗೈ ಸಮುದಾಯಕ್ಕೆ ನೀಡಲಾಗಿದೆ. ಕೋಲಾರದಲ್ಲಿಯೂ ಬಲಗೈ ನೀಡಿದರೆ ಆಕ್ರೋಶ ವ್ಯಕ್ತವಾಗುತ್ತೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯದವರಿಗೆ ನೀಡಲಾಗಿದೆ. ಇದೇ ರೀತಿ ಕೋಲಾರದಲ್ಲಿಯೂ ಎಡಗೈ ಸಮುದಾಯದವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಸಭೆಯಲ್ಲಿ ಯಾರ ಹೆಸರೂ ಪ್ರಸ್ತಾಪವಾಗಿಲ್ಲ. ಹೀಗಾಗಿ ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೋ ಕುತೂಹಲ ಮೂಡಿದೆ.