ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ರಾಜ್ಯದಲ್ಲಿ ಸಾಕಷ್ಟು ಚರ್ಚೆಯಲ್ಲಿ ಇರುವುದು ಬಿಜೆಪಿ ಸರ್ಕಾರದ ಶೇಕಡ 40ರಷ್ಟು ಲಂಚ ಹಾಗೂ ಬಿಜೆಪಿ ಶಾಸಕರ ಪುತ್ರ ಲೋಕಾಯುಕ್ತರ ಕೈಗೆ ಸಿಕ್ಕಬಿದ್ದಿದ್ದು, 6 ಕೋಟಿಗೂ ಹೆಚ್ಚು ಮೌಲ್ಯದ ಹಣವನ್ನು ಜಪ್ತಿ ಮಾಡಲಾಗಿದೆ. ಇದರ ನಡುವೆ ಸಚಿವ ಭೈರತಿ ಬಸವರಾಜ್ ಈ ಹಿಂದೆ 3.75 ಕೋಟಿ ರೂಪಾಯಿ ಪಡೆದಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ.
ಕೆಎಸ್ ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಭೈರತಿ ಬಸವರಾಜ್, ನಾನು 12 ತಿಂಗಳು ಕೆಎಸ್ ಡಿಎಲ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 3.75 ಕೋಟಿ ರೂಪಾಯಿ ಪಡೆದಿದ್ದು ಸತ್ಯ. ಬಂದ ಹಣವನ್ನು ಚೆಕ್ ಮೂಲಕ ಬಿಬಿಎಂಪಿಗೆ ನೀಡಿದ್ದೆ, ನನ್ನ ಕ್ಷೇತ್ರದ ಸರ್ಕಾರಿ ಶಾಲೆ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದು ನಾನು ಕಾಂಗ್ರೆಸ್ ನಲ್ಲಿದ್ದೆ. ಆಗ 12 ತಿಂಗಳು ಕೆಎಸ್ ಡಿಎಲ್ ಅಧ್ಯಕ್ಷನಾಗಿದ್ದೆ. ಕಾಂಗ್ರೆಸ್ ಬಿಟ್ಟು 3 ವರ್ಷವಾಗಿದೆ. ಇಂದು ಪಾರದರ್ಶಕತೆ ಬಗ್ಗೆ ಮಾತನಾಡುವವರು ಅಂದು ಬಾಯಿಯಲ್ಲಿ ಕಡುಬು ಇಟ್ಟುಕೊಂಡಿದ್ರಾ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ.