ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹೊಸ ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆಯಿತು. ಮೊದಲ ಅಧಿವೇಶನ, ಬಜೆಟ್ ಮಂಡನೆ ಸಹ ಆಗಿ ಹೋಯಿತು. ಆದರೆ, ಇದುವರೆಗೂ ವಿಪಕ್ಷ ನಾಯಕನ ಆಯ್ಕೆ ಮಾತ್ರ ನಡೆದಿಲ್ಲ. ಈ ಕಾರಣಕ್ಕೆ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಕಿಚಾಯಿಸಿದೆ.
ಬೊಮ್ಮಾಯಿಯವರು ಆಸೆಯಿಂದ ದೆಹಲಿಗೆ ಹೋಗಿದ್ದು ‘ದಂಡ’ಯಾತ್ರೆ ಆಯ್ತು. ಯಾತ್ನಾಳ್ ಅವರು ಅಬ್ಬರಿಸಿ ಸುಸ್ತಾಗಿ ಮಲಗಿದ್ದಾಯ್ತು, ಸುನಿಲ್ ಕುಮಾರ್ ಅವರು ಸೈಲೆಂಡ್ ಆಗಿ ಮನೆ ಸೇರಿದ್ದಾಯ್ತು, ವಿಪಕ್ಷ ನಾಯಕನ ಆಯ್ಕೆ ಮಾಡುವ ಸೂಕ್ತ ಸಂದರ್ಭ, ಸಮಯ, ಮುಹೂರ್ತ ಇನ್ನೂ ಕೂಡಿ ಬರಲಿಲ್ಲವೇ ಎಂದು ಕೇಳುವ ಮೂಲಕ ಕಾಲೆಳೆಯಲಿದೆ.
ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೊಂದು ಕೆಟ್ಟ ಸಂಪ್ರದಾಯಕ್ಕೆ ಬಿಜೆಪಿ ನಾಂದಿ ಹಾಡಿದೆ. ಯಡಿಯೂರಪ್ಪ, ಬೊಮ್ಮಾಯಿ, ಯತ್ನಾಳ್ ಸೇರಿ ಅನೇಕರು ಶೀಘ್ರದಲ್ಲಿ ವಿಪಕ್ಷ ನಾಯಕನ ಆಯ್ಕೆ ಆಗುತ್ತೆ ಎಂದು ಹೇಳುತ್ತಲೇ ಬಂದರೂ ಅದು ಆಗಲಿಲ್ಲ. ಜನರ ಎದುರು ಅವರಿಗೆ ಅವಮಾನವಾಗಿದ್ದು ಮಾತ್ರ ಸತ್ಯ. ಇದಕ್ಕೆ ಬಿಜೆಪಿ ಹೈಕಮಾಂಡ್ ತೆರೆ ಎಳೆಯುತ್ತಾ ಅಥವ ವಿಧಾನಸಭಾ ಚುನಾವಣೆ ಸೋಲಿನ ಕೋಪವನ್ನು ಈ ರೀತಿ ತೀರಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.