ಪ್ರಜಾಸ್ತ್ರ ಡೆಸ್ಕ್
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಟಿಕೆಟ್ ಮಿಸ್ ಆದ ನಾಯಕರ ಅಸಮಾಧಾನ ಸ್ಫೋಟಗೊಳುತ್ತಿವೆ. ಅದರಲ್ಲೂ ಕೆ.ಎಸ್ ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದು, ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿರುದ್ಧವೇ ಕಣಕ್ಕೆ ಇಳಿಯುತ್ತಿದ್ದಾರೆ.
ಹಾವೇರಿ ಕ್ಷೇತ್ರದಿಂದ ಮಗನಿಗೆ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿದ ಯಡಿಯೂರಪ್ಪ ಮಾತು ತಪ್ಪಿದ್ದಾರೆ. ಸ್ಪರ್ಧೆಗೆ ಇಷ್ಟವಿಲ್ಲದ ಬೊಮ್ಮಾಯಿಗೆ ಟಿಕೆಟ್ ಕೊಡಲಾಗಿದೆ. ನಾವು ಏನು ಅನ್ಯಾಯ ಮಾಡಿದ್ದೇವೆ ಎಂದು ಈಶ್ವರಪ್ಪ ಹಾಗೂ ಪುತ್ರ ಕಾಂತೇಶ್ ಕೇಳುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಮಕ್ಕಳ ವಿರುದ್ಧ ಈಶ್ವರಪ್ಪ ಹಾಗೂ ಮಗ ತಿರುಗಿ ಬಿದ್ದಿದ್ದು, ಹೈಕಮಾಂಡ್ ಏನು ಕ್ರಮ ತೆಗೆದುಕೊಳ್ಳುತ್ತೆ ಅನ್ನೋ ಪ್ರಶ್ನೆ ಇದೆ.
ಬಂಡಾಯ ಎದ್ದವರನ್ನು ತಣ್ಣಗೆ ಮಾಡುವುದು ಬಿಜೆಪಿಗೆ ಗೊತ್ತಿದೆ. ಒಂದು ವೇಳೆ ಅದಾಗದೆ ಹೋದರೆ ಈಶ್ವರಪ್ಪ ಸ್ಪರ್ಧೆ ಖಿಚಿತವಾದರೆ ಇದರ ಲಾಭ ಕಾಂಗ್ರೆಸ್ ಗೆ ಆಗುತ್ತಾ ಅನ್ನೋ ಪ್ರಶ್ನೆ ಇದೆ. ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಬಂಗಾರಪ್ಪ ಪುತ್ರಿ, ನಟ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಶಿವಮೊಗ್ಗದಲ್ಲಿ ಅಭ್ಯರ್ಥಿಯಾಗಿದ್ದಾರೆ. ಒಂದೊಮ್ಮೆ ಸೋಲು ಕಂಡಿರುವ ಗೀತಾ ಶಿವರಾಜಕುಮಾರ್ ಈ ಬಾರಿ ಗೆಲುವಿನ ಹಠ ತೊಟ್ಟಿದ್ದಾರೆ. ಸಹೋದರ ಸಚಿವನಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸಹ ಇದ್ದಾರೆ. ಬಿಜೆಪಿಯೊಳಗಿನ ಸಂಘರ್ಷ ಮುಂದುವರೆದು ಚುನಾವಣೆಯಲ್ಲಿ ಮತಗಳು ವಿಭಜನೆಯಾದ್ರೆ ಕಾಂಗ್ರೆಸ್ ಗೆಲುವು ಪಕ್ಕಾ. ಮೋದಿಗಾಗಿ ನಾವು ಎಂದು ಈಶ್ವರಪ್ಪ ಹೇಳುತ್ತಿದ್ದರೂ ಸ್ವತಃ ಅವರ ಗೆಲುವು ಸುಲಭವಾಗಿದೇನಾ ಅನ್ನೋ ಪ್ರಶ್ನೆ ಕೂಡ ಇದೆ. ಮಗನ ಸಲುವಾಗಿ ಬಂಡಾಯ ಎದ್ದಿರುವ ಈಶ್ವರಪ್ಪನ ವಿರುದ್ಧ ಬಿಜೆಪಿ ಏನು ತಂತ್ರಗಾರಿಕೆ ಹೆಣಿಯುತ್ತೆ ಕಾದು ನೋಡಬೇಕಿದೆ.