ಸಿಂದಗಿ: ಪಟ್ಟಣದ ಪುರಸಭೆಗೆ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಗಾರ ಅವರು ಇಂದು ಮಧ್ಯಾಹ್ನ ದಿಢೀರ್ ಭೇಟಿ ನೀಡಿದ್ರು. ಹೀಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗೆ ಕಂಡಿದ್ದು ಮಾತ್ರ ಬರೀ ಖಾಲಿ ಖಾಲಿ ಕುರ್ಚಿಗಳು.
ಪ್ರಥಮದರ್ಜೆ ಸಹಾಯಕಾಧಿಕಾರಿ ಡಾಲಾಯತ ಸೇರಿದಂತೆ ಇತರೆ ಸಿಬ್ಬಂದಿ ವಿಚಾರಣೆ ಮಾಡಿ, ಮಾಹಿತಿ ಪಡೆದುಕೊಂಡ್ರು. ಇಲ್ಲಿನ ಸಿಬ್ಬಂದಿ ವ್ಯವಹಾರವೆಲ್ಲ ಮೊಬೈಲ್ ಮೂಲಕವೇ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದಿವೆ ಎಂದು ತರಾಟೆಗೆ ತೆಗೆದುಕೊಂಡ್ರು. ಅಲ್ದೇ, ಒಂದು ತಿಂಗಳ ಸಿಸಿಟಿವಿ ಪುಟೇಜ್ ಕೊಡಿ ಎಂದು ಹೇಳಿದ್ರು.
ಯಾವ ಕಾರಣಕ್ಕೆ ಇಷ್ಟೊಂದು ಸಿಬ್ಬಂದಿ ಇಂದು ಗೈರಾಗಿದ್ರು ನ್ನೋದರ ಮಾಹಿತಿ ಪಡೆದ್ರು. ಪುರಸಭೆ ಮುಖ್ಯಾಧಿಕಾರಿಯವರೇ ಕರ್ತವ್ಯಕ್ಕೆ ಬಂದಿರುವ ಬಗ್ಗೆ ಸಹಿ ಮಾಡುವುದಿಲ್ಲ. ಉಳಿದವರ ಕಥೆ ಏನೆಂದು ವಿಚಾರಿಸಿದ್ರು. ಅಲ್ದೇ ಮಾಹಿತಿ ಹಕ್ಕು ಕಾಯ್ದೆ ಅಡಿ ಸಾರ್ವಜನಿಕರು ಸಂಪರ್ಕಿಸಬೇಕಾದ ಅಧಿಕಾರಿಗಳ ಬೋರ್ಡ್ ಹಾಕದಿರುವುದರ ಬಗ್ಗೆ ವಿಚಾರಿಸಿ ಸ್ಥಳದಲ್ಲಿಯೇ ಎಸಿಬಿ ಅಧಿಕಾರಿಗಳಿಗೆ ಫೋನ್ ಮಾಡಿ ಅವರ ಗಮನಕ್ಕೂ ತಂದ್ರು. ಈ ಬಗ್ಗೆ ‘ಪ್ರಜಾಸ್ತ್ರ’ದಲ್ಲಿ ಫಾಲೋಅಪ್ ಸ್ಟೋರಿ ಮಾಡಿರುವುದನ್ನ ಲೋಕಾಯುಕ್ತ ಡಿವೈಎಸ್ಪಿ ಅವರ ಗಮನಕ್ಕೆ ತರಲಾಯ್ತು.
ಈ ವೇಳೆ ಮಾಧ್ಯಮದವರ ಜೊತೆ ಮಾತ್ನಾಡಿದ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಗಾರ ಅವರು, ಇದೊಂದು ಸರ್ಪ್ರೈಸ್ ಭೇಟಿಯಾಗಿತ್ತು. 20 ಜನ ಸಿಬ್ಬಂದಿ ಗೈರಾಗಿರುವುದು ಕಂಡು ಬಂದಿದೆ. ಕೆಲಸದ ನಿಮಿತ್ತ ಹೊರಗೆ ಹೋಗಿದ್ರೆ ಸಹಿ ಮಾಡಿ ಹೋಗಬೇಕಿತ್ತು. ಇದನ್ನ ಯಾರೂ ಮಾಡಿಲ್ಲ ಅಂತಾ ತಿಳಿಸಿದ್ರು. ಇನ್ನೊಮ್ಮೆ ಸರ್ಪ್ರೈಸ್ ಭೇಟಿ ನೀಡುವುದಾಗಿ ಹೇಳಿದ್ರು.