ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಗುಂಡಿನ ಸದ್ದು ಕೇಳಿಸಿದೆ. ಅಷ್ಟು ಮಾತ್ರವಲ್ಲ ಒಂದು ಜೀವ ಸಹ ಬಲಿಯಾಗಿದೆ. ದಾಂಡೇಲಿ ಮೂಲದ ಶ್ಯಾಮಸುಂದರ ಅನ್ನೋ ವ್ಯಕ್ತಿ ಹತ್ಯೆಗಿಡಾಗಿದ್ದಾನೆ.
ಧಾರವಾಡದ ಹಳಿಯಾಳ ಬಳಿ ಕಾರಿನಲ್ಲಿ ಬರುತ್ತಿದ್ದ ಶ್ಯಾಮಸುಂದರನನ್ನ ಬೈಕ್ ಮೇಲೆ ಬಂದ ಮೂವರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಲು ಆಗಮಿಸುತ್ತಿದ್ದಾಗ ದಾಂಡೇಲಿಯಿಂದ ಮೂವರು ಹಿಂಬಾಲಿಸಿಕೊಂಡೇ ಬಂದಿದ್ದಾರೆ. ನಿಗದಿ ಗ್ರಾಮದಿಂದ ಹಾದು ಹೋಗುವಾಗ ಏಕಾಏಕಿ ಕಾರ್ ಓವರ್ ಟೇಕ್ ಮಾಡಿ ಕಿಟಕಿಯಿಂದ ಗುಂಡು ಹಾರಿಸಿದ್ದು, ಗುಂಡು ಶ್ಯಾಮಸುಂದರ ಎಡಭುಜಕ್ಕೆ ನುಗ್ಗಿದೆ. ತಕ್ಷಣ ಅವರನ್ನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
ಶ್ಯಾಮಸುಂದರ ಪ್ಯಾನೋಸಾನಿಕ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪೊಲೀಸರು ತನಿಖೆ ಚುರುಕುಗೊಳ್ಳಿಸಿದ್ದಾರೆ. ಕಳೆದ ವಾರವಷ್ಟೇ ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ವ್ಯಕ್ತಿಯ ಶೂಟೌಟ್ ಮರೆಯುವ ಮುನ್ನವೇ ಇಂದು ಧಾರವಾಡದಲ್ಲಿ ಹಾಡುಹಗಲೇ ಮತ್ತೊಂದು ಪ್ರಕರಣ ನಡೆದಿದೆ. ಇದ್ರಿಂದಾಗಿ ಅವಳಿ ನಗರ ಅಪರಾಧಿ ಕೃತ್ಯಗಳ ತಾಣವಾಗ್ತಿದೆಯಾ ಅನ್ನೋ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.