ಪ್ರಜಾಸ್ತ್ರ ಸುದ್ದಿ
ವಿಜಯಪುರ: ಅಲಿಯಾಬಾದ್ ಕೈಗಾರಿಕ ಪ್ರದೇಶದಲ್ಲಿರುವ ರಾಜ್ ಗುರು ಫುಡ್ ಗೋದಾಮಿನಲ್ಲಿ ಸಂಭವಿಸಿದ ದುರಂತೆದಲ್ಲಿ ಇದುವರೆಗೂ ಐವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸೋಮವಾರ ಸಂಜೆ ಘಟನೆ ನಡೆದಿದ್ದು, ತಡರಾತ್ರಿಯವರೆಗೂ ಕಾರ್ಯಾಚರಣೆ ನಡೆಸಲಾಗಿದೆ.
ಬೃಹತ್ ಟ್ಯಾಂಕ್ ಗಳು ನಿಗದಿಗಿಂತ ಹೆಚ್ಚಿನ ಲೋಡ್ ಮಾಡಿದ್ದರಿಂದ ಸ್ಫೋಟಗೊಂಡಿವೆ. ಹೀಗಾಗಿ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳದ ಅಡಿಯಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಬೆಳಗಾವಿ, ಕಲಬುರಗಿಯಿಂದ ತಡರಾತ್ರಿ ಸುಮಾರು 2.30ರ ಸಮಯಕ್ಕೆ ಎಸ್ ಡಿಆರ್ ಎಫ್ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿದ್ದಾರೆ.
ಮೃತರು ಬಿಹಾರ ಮೂಲದವರೆಂದು ಹೇಳಲಾಗುತ್ತಿದೆ. ರಾಮ್ ಬಲಕ್, ಲುಕೋ ಜಾಧವ್, ರಾಜೇಶಕುಮಾರ್, ರಾಮ್ಜಿ ಮುಖಿಯಾ ಹಾಗೂ ಶಂಭು ಮುಖಿಯಾ ಮೃತರು ಎಂದು ಗುರುತಿಸಲಾಗಿದೆ. ಇನ್ನು ಸಿಲುಕಿಕೊಂಡಿರುವ ಕಾರ್ಮಿಕರು ಸಹ ಬದುಕುಳಿದಿರುವ ಸಾಧ್ಯತೆ ಸಹ ಕಡಿಮೆ ಎನ್ನಲಾಗುತ್ತಿದೆ. ಇನ್ನು ಗೋದಾಮು ಮಾಲೀಕ ಕಿಶೋರ್ ಜೈನ್ ತಲೆ ಮರೆಸಿಕೊಂಡಿದ್ದಾನೆ. ಕಳೆದ ವರ್ಷ ಸಹ ಇಬ್ಬರು ಮೃತಪಟ್ಟಿದ್ದು, ಪರಿಹಾರ ಸಹ ನೀಡಿಲ್ಲ. ಈ ಬಾರಿ ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರಕ್ಕೆ ಕಾರ್ಮಿಕರು ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್ ಶಿಂಧೆ, ಎಸ್ಪಿ ಖುಷಿಕೇಶ್ ಸೋನಾವಣೆ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಗೆ ಎಲ್ಲ ರೀತಿಯ ಮಾರ್ಗದರ್ಶನಗಳನ್ನು ನೀಡಿದ್ದಾರೆ.