ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 19ರಂದು ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಯಿತು. ಈ ವೇಳೆ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ರು. ಇದೀಗ ಈ ಹಿಂಸೆಯ ಹಿಂದೆ ಸಂಚು ನಡೆಸಲಾಗಿದೆ ಅಂತಾ ಹೇಳಲಾಗ್ತಿದೆ. ಎಲ್ಲೆಡೆ ಆ ದಿನದ ವಿಡಿಯೋ, ಫೋಟೋಸ್ ಹರಿದಾಡ್ತಿವೆ. ಈ ಬಗ್ಗೆ ರಾಜಕೀಯ ನಾಯಕರು ಆಡ್ತಿರುವ ಮಾತುಗಳು ಇಲ್ಲಿವೆ..
ಎನ್ಆರ್ ಸಿ, ಸಿಎಎ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆ ಮಾಡ್ತಿದ್ದಾರೆ. ಮಂಗಳೂರು ಹಿಂಸಾಚಾರಕ್ಕೆ ಕಾಂಗ್ರೆಸ್ ನ್ನ ಹೊಣೆ ಮಾಡಿ ಜನರ ಭಾವನೆಗಳನ್ನ ಕೆರಳಿಸಬೇಡಿ ಎಂದು ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರ ಹೇಳಿದ್ದಾರೆ. ಇದನ್ನ ಕಾಂಗ್ರೆಸ್ ಹಣೆಗಾದ್ರೂ ಕಟ್ಟಿ. ನನ್ನ ಹಣೆಗಾದ್ರೂ ಕಟ್ಟಿ ನಾವು ಇದಕ್ಕೆಲ್ಲ ಹೆದರಲ್ಲ ಅಂತಾ ಸವಾಲು ಹಾಕಿದ್ದಾರೆ.
ಮಂಗಳೂರು ಗಲಭೆ ವ್ಯವಸ್ಥಿತ ಸಂಚು. ಇದರಲ್ಲಿ ಭಾಗಿಯಾದವರ ಮೇಲೆ ಕಾನೂನು ರೀತಿಯ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಂಚು ಎಂದು ತಿಳಿದು ಬಂದಿದೆ. ಹೀಗಾಗಿ ಸಿಐಡಿ ಹಾಗೂ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ ಅಂತಾ ತಿಳಿಸಿದ್ರು.
ಮಂಗಳೂರಿನಲ್ಲಿ ನಡೆದ ಗೋಲಿಬಾರ್ ನಲ್ಲಿ ರಾಜಕೀಯ ಕೈವಾಡದ ಶಂಕೆಯಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ ಹೇಳಿದ್ದಾರೆ. ಗೋಲಿಬಾರ್ ನಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಮಾತ್ನಾಡಿದ ಅವರು, ರಾಜಕೀಯ ಕೈವಾಡದಿಂದ ಗೋಲಿಬಾರ್ ನಡೆದಿದೆ. ಇದೊಂದು ಸರ್ಕಾರಿ ಪ್ರಾಯೋಜಿತ ಗೋಲಿಬಾರ್ ಅಂತಾ ಆರೋಪಿಸಿದ್ರು.
ಮಂಗಳೂರು ಗಲಭೆಗೆ ಹಿಂದೆ ಎಸ್ ಡಿಪಿಐ, ಪಿಎಫ್ಐ ಹಾಗೂ ಕಾಂಗ್ರೆಸ್ ನೇರ ಕಾರಣವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಆರೋಪಿಸಿದ್ದಾರೆ. ಪೊಲೀಸರ ಮೇಲೆ ಕಲ್ಲು ಎಸೆದವರು ಎಲ್ಲಿಯವರು, ಅವರ ಉದ್ದೇಶವೇನು ಅನ್ನೋದು ಸಾಬೀತಾಗಿದೆ. ಇದರ ಹೊಣೆಯನ್ನ ಎಸ್ ಡಿಪಿಐ, ಪಿಎಫ್ಐ ಹಾಗೂ ಕಾಂಗ್ರೆಸ್ ಹೊತ್ತು ಕೊಳ್ಳಬೇಕು ಅಂತಾ ಹೇಳಿದ್ರು.