ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮಂಗಳವಾರ ನಡೆದ ಡಿಡಬ್ಲುಸಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಸರ್ಕಾರದ ಗ್ಯಾರೆಂಟಿಗಳು 2004ರಲ್ಲಿ ವಾಜಪೇಯಿ ಸರ್ಕಾರ ಹೇಳಿದ ಇಂಡಿಯಾ ಶೈನಿಂಗ್ ನಂತೆ ಪೊಳ್ಳು ಎಂದರು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಣಾಳಿಕೆ ಕುರಿತು ಚರ್ಚಿಸಲಾಯಿತು. ಇಡೀ ದೇಶ ಬದಲಾವಣೆ ಬಯಸುತ್ತಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ. ಜನರ ಬೇಕು ಬೇಡಗಳನ್ನು ತಿಳಿದುಕೊಳ್ಳಲಾಗಿದೆ. ಇದು ಬರೀ ರಾಜಕೀಯ ರ್ಯಾಲಿ ಆಗಿರಲಿಲ್ಲ. ಇತಿಹಾಸದಲ್ಲಿಯೇ ಅತಿದೊಡ್ಡ ಜನಸಂಪರ್ಕ ಆಂದೋಲನವಾಗಿದೆ ಎಂದರು.
ನಮ್ಮ ಕಾರ್ಯಕರ್ತರು ನಮ್ಮ ಪ್ರಣಾಳಿಕೆಯಲ್ಲಿನ ಪ್ರತಿಯೊಂದು ಅಂಶವನ್ನು ಹಳ್ಳಿ, ಪಟ್ಟಣ, ನಗರಗಳಲ್ಲಿನ ಮನೆ ಮನೆಗೆ ತಲುಪಿಸಬೇಕು. ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಲು ಬದ್ಧವಾಗಿದೆ. ಹೀಗಾಗಿಯೇ 1926ರಿಂದ ಕಾಂಗ್ರೆಸ್ ಪ್ರಣಾಳಿಕೆ ಅಂದರೆ ವಿಶ್ವಾಸ ಹಾಗೂ ಬದ್ಧತೆಯಾಗಿದೆ ಎಂದರು.
ಈ ವೇಳೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್, ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ ವೇಣುಗೋಪಾಲ, ಸಂಸದ ರಾಹುಲ್ ಗಾಂಧಿ ಸೇರಿ ಇತರರು ಉಪಸ್ಥಿತರಿದ್ದರು.