ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಗರದ ವೈಟ್ ಫೀಲ್ಡ್ ಹತ್ತಿರದ ಕಾಡುಗೋಡಿ ವ್ಯಾಪ್ತಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ 9 ತಿಂಗಳ ಕೂಸು ಮೃತಪಟ್ಟ ಘಟನೆ ಸಂಬಂಧ, ಐವರು ಬೆಸ್ಕಾಂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಹೋಪ್ ಫಾರ್ಮ್ ಸಿಗ್ನಲ್ ಹತ್ತಿರ ಬರೋಬ್ಬರಿ 11 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಸೌಂದರ್ಯ (22), ಪತಿ ಸಂತೊಷ್ ಹಾಗೂ 9 ತಿಂಗಳು ಮಗು ಭಾನುವಾರ ನಸುಕಿನ ಜಾವ ಚೆನ್ನೈನಿಂದ ಆಗಮಿಸಿ ಮನೆಗೆ ಹೊರಟಿದ್ದರು. ಈ ವೇಳೆ ಕತ್ತಲಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸೌಂದರ್ಯ ತುಳಿದಿದ್ದಾಳೆ. ಆಕೆ ಹೊತ್ತುಕೊಂಡಿದ್ದ ಮಗು ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಪತ್ನಿ ಹಾಗೂ ಮಗುವನ್ನು ರಕ್ಷಿಸಲು ಪತಿ ಸಂತೋಷ್ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಇದಕ್ಕೆ ಕಾರಣರಾದವರನ್ನು ಅಮಾನತುಗೊಳಿಸಲು ಇಂಧನ ಸಚಿವ ಕೆ.ಜೆ ಜಾರ್ಜ್ ಆದೇಶಿಸಿದ್ದರು. ಕರ್ತವ್ಯಲೋಪದ ಅಡಿಯಲ್ಲಿ 4ನೇ ಪೂರ್ವ ವಿಭಾಗದ ಸಹಾಯಕ ಇಂಜಿನಿಯರ್ ಟಿ.ಸುಬ್ರಹ್ಮಣ್ಯ, ಸಹಾಯಕ ಇಂಜಿನಿಯರ್ ಎಸ್.ಚೇತನ್, ಕಿರಿಯ ಇಂಜಿನಿಯರ್ ರಾಜಣ್ಣ, ಕಿರಿಯ ಪವರ್ ಮನ್, ಮಂಜುನಾಥ್ ರೇವಣ್ಣ ಹಾಗೂ ಲೈನ್ ಮನ್ ಬಸವರಾಜು ಎಂಬುವರನ್ನು ಅಮಾನತುಗೊಳಿಸಲಾಗಿದೆ.