ಪ್ರಜಾಸ್ತ್ರ ಕ್ರೀಡಾ ಸುದ್ದಿ
ಐಸಿಸಿ ಮಹಿಳಾ ಚಾಂಪಿಯನ್ ಶಿಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅಸಭ್ಯವಾಗಿ ನಡೆದುಕೊಂಡು, ಕ್ರಿಕೆಟ್ ಲೋಕದ ದಿಗ್ಗಜರು ಖಂಡಿಸಿದ್ದಾರೆ. ಈ ಘಟನೆ ಸಂಬಂಧ ಮುಂದಿನ ಎರಡು ಪಂದ್ಯಗಳಿಂದ ಅವರನ್ನು ಅಮಾನತುಗೊಳಿಸಲಾಗಿದೆ.
ಔಟ್ ಆದ ಬಳಿಕ ವಿಕೆಟ್ ಗೆ ಬ್ಯಾಟಿನಿಂದ ಹೊಡೆದು ತಪ್ಪಿಗಾಗಿ, ಲೆವಲ್ 2ರ ಅಪರಾಧಕ್ಕಾಗಿ ಪಂದ್ಯದ ಶೇಕಡ 50ರಷ್ಟು ಶುಲ್ಕ ದಂಡ. ಅಂಪೈರಿಂಗ್ ಮಾನದಂಡ ಪ್ರಶ್ನಿಸಿದ್ದಕ್ಕೆ ನೀತಿ ಸಂಹಿತೆಯ ಆರ್ಟಿಕಲ್ 2.8 ಉಲ್ಲಂಘಿಸಿದ್ದಕ್ಕೆ ಪಂದ್ಯದ ಶೇಕಡ 25ರಷ್ಟು ಶುಲ್ಕದ ದಂಡ ವಿಧಿಸಲಾಗಿದೆ. ಹೀಗೆ ಪಂದ್ಯದ ಶೇಕಡ 75ರಷ್ಟು ಶುಲ್ಕದ ದಂಡ ಬಿದ್ದಿದೆ. 2 ಅಪರಾಧಿಗಳಿಗಾಗಿ 4 ಡಿಮೆರಿಟ್ ಅಂಕ ನೀಡಲಾಗಿದೆ. ಈ ಕುರಿತು ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಶುಕ್ರವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಐಸಿಸಿ ನಿರ್ಧಾರಕ್ಕೆ ಮೇಲ್ಮನವಿ ಸಲ್ಲಿಸುವ ಅವಧಿ ಮುಗಿದಿದೆ. ಹೀಗಾಗಿ ನಿಷೇಧ ಹಿಂದಕ್ಕೆ ಪಡೆಯಲು ಮನವಿ ಮಾಡುವುದಿಲ್ಲ ಎಂದಿದ್ದಾರೆ. ಟೀಂ ಇಂಡಿಯಾದ ಮಾಜಿ ಆಟಗಾರರು, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಎನ್ ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರಿಗೆ, ನಡವಳಿಕೆ ಕುರಿತು ಹರ್ಮನ್ ಪ್ರೀತ್ ಕೌರ್ ಗೆ ಬುದ್ದಿ ಹೇಳುವಂತೆ ನಿರ್ದೇಶಿಸಲಾಗಿದೆ.