ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಪಟ್ಟಣದ ಟಳಕವಾಡಿ-ಖಾನಾಪೂರ ರಸ್ತೆಯ ಹೋಟೆಲ್ ವೊಂದರಿಂದ ಮಂಗಳವಾರ ರಾತ್ರಿ ಸುಮಾರು 11.30ರ ಸಮಯದಲ್ಲಿ ವಿಕಲಚೇತನ ರಮೇಶ್ ಚೌಗಲೆ(25) ಅನ್ನೋ ಯುವಕ ಊಟ ತೆಗೆದುಕೊಂಡು ಹೊರಟಿದ್ದ ಸಂದರ್ಭದಲ್ಲಿ, ಮೂವರು ಪೊಲೀಸರು ಹಲ್ಲೆ ಮಾಡಿದ್ದಾರೆ. ಹಲ್ಲೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ.
ಉದ್ಯಮವಿಭಾಗ ಠಾಣೆಯ ಮೂವರು ಪೊಲೀಸರು ಹಲ್ಲೆ ಮಾಡಿದ್ದರ ಕುರಿತು ಸೂಕ್ತ ತನಿಖೆ ನಡೆಸಿ, ವಿಕಲಚೇತನ ಯುವಕನಿಗೆ ನ್ಯಾಯ ಒದಗಿಸಿಕೊಡಬೇಕೆಂದು ವಿಕಲಚೇತನರ ಹಾಗೂ ಹಿರಿನಾಗರಿಕರ ಸಬಲೀಕರ ಇಲಾಖೆಯ ಬೆಳಗಾವಿ ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿಗಳ ಕಚೇರಿಯಿಂದ ನಗರ ಪೊಲೀಸ್ ಆಯುಕ್ತರಿಗೆ ಶುಕ್ರವಾರ ಪತ್ರ ಬರೆಯಲಾಗಿದೆ.
ಇನ್ನು ಗೃಹ ಸಚಿವಾಲಯದಿಂದಲೂ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶುಕ್ರವಾರ ಪತ್ರ ಬರೆಯಲಾಗಿದೆ. ಘಟನೆಯ ಕುರಿತು ಕೂಲಂಕುಷವಾಗಿ ಪರಿಶೀಲಿಸಿ, ತನಿಖೆ ನಡೆಸಿ ಅಂಗವಿಕಲ ಯುವಕನಿಗೆ ನ್ಯಾಯ ಒದಗಿಸಬೇಕೆಂದು ಗೃಹ ಸಚಿವರಿಂದ ನಿರ್ದೇಶಿಸಲಾಗಿದೆ. ಈ ಕುರಿತು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಪತ್ರ ಬರೆದಿದ್ದಾರೆ.