ಪ್ರಜಾಸ್ತ್ರ ವಿಶೇಷ ವರದಿ:
ಬೆಂಗಳೂರು: ಇಂದು 10 ಜನ ವಲಸೆ ಶಾಸಕರು ಸಚಿವರಾಗುವ ಮೂಲಕ ಮಂತ್ರಿ ಪದವಿ ಪಡೆದಿದ್ದಾರೆ. ಇಷ್ಟು ದಿನಗಳ ಅವರ ಇಷ್ಟಾರ್ಥ ಇಂದು ಈಡೇರಿದೆ. ಇದರ ಜೊತೆಗೆ ಬಿಜೆಪಿಗೆ ಬಂದ ಶಾಸಕ ಮಹೇಶ ಕುಮಟಳ್ಳಿ, ಸೋತ ಹೆಚ್.ವಿಶ್ವನಾಥ, ಎಂಟಿಬಿ ನಾಗರಾಜ, ಆರ್.ಶಂಕರ ಅವರ ಕಥೆ ಒಂದು ರೀತಿಯಾದ್ರೆ ಮೂಲ ಬಿಜೆಪಿಗರ ವ್ಯಥೆ ಇನ್ನೊಂದು ರೀತಿಯಿದೆ.
ಮೊದಲಿನಿಂದಲೂ ಪ್ರತ್ಯೇಕ ಉತ್ತರ ಕರ್ನಾಟಕದ ಮಾತು ತೆಗೆಯುತ್ತಿದ್ದ ಬಿಜೆಪಿ ಶಾಸಕ ಉಮೇಶ ಕತ್ತಿ, ರಾಜುಗೌಡ, ಮುರಗೇಶ ನಿರಾಣಿ, ಅರವಿಂದ ಲಿಂಬಾವಳಿ, ಸಿ.ಪಿ ಯೋಗೇಶ್ವರ ಸೇರಿದಂತೆ ಅನೇಕ ಕೇಸರಿ ನಾಯಕರು ಕೆಂಡ ಕಾರುತ್ತಿದ್ದಾರೆ. ಚಿತ್ರದುರ್ಗ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. 8 ಮಂದಿ ಮೊದಲ ಬಾರಿಗೆ ಸಚಿವರಾಗಿದ್ದಾರೆ. ನಾನು ಹಿರಿಯ ಶಾಸಕ. ನಮಗೂ ಸಚಿವ ಸ್ಥಾನ ನೀಡಿಯೆಂದು ಹೇಳಿದ್ದಾರೆ. ಇತ್ತ ಅರವಿಂದ ಲಿಂಬಾವಳಿ ನನ್ಗೆ ಸಚಿವ ಸ್ಥಾನ ತಪ್ಪಲು ಹೈಕಮಾಂಡ್ ಕಾರಣವಲ್ಲ. ಸಿಎಂ ಕಾರಣವೆಂದು ನೇರ ವಾಗ್ದಾಳಿ ನಡೆಸಿದ್ದಾರೆ. ಸಚಿವ ಸ್ಥಾನ ಪಟ್ಟಿ ತಯಾರಿಸುವುದು ಸಿಎಂ. ಹೈಕಮಾಂಡ್ ಅಲ್ಲ. ಸಚಿವ ಸ್ಥಾನ ನೀಡುವುದು ಅವರ ಪರಮಾಧಿಕಾರ. ಇದಕ್ಕೆ ಸಿಎಂ ಕಾರಣವೆಂದು ಕಿಡಿ ಕಾರಿದ್ದಾರೆ.
ನಮ್ಮನ್ನ ಮೂಲೆಗುಂಪು ಮಾಡಲಾಗ್ತಿದೆ ಅನ್ನೋ ಆಕ್ರೋಶವನ್ನ ಮೂಲ ಬಿಜೆಪಿಗರು ಹೊರ ಹಾಕ್ತಿದ್ದಾರೆ. ಹೀಗಾಗಿ ಇವರು ಸಿಎಂ ವಿರುದ್ಧ ಯಾವಾಗ ಸ್ಫೋಟಗೊಳ್ತಾರೆ ಅನ್ನೋದು ಗೊತ್ತಾಗ್ತಿಲ್ಲ. ಇದು ಸಿಎಂ ಬಿ.ಎಸ್ ಯಡಿಯೂರಪ್ಪಗೆ ಮತ್ತೊಂದು ಟೆನ್ಷನ್ ನೀಡಿದೆ. ಇದ್ರಿಂದಾಗಿ ಇವರನ್ನ ಸಂಬಾಳಿಸುವುದು ಹೇಗೆ ಅಂತಿದ್ದಾರೆ.
ಇನ್ನು ಕಲ್ಯಾಣ ಕರ್ನಾಟಕ ಭಾಗದ ಶಾಸಕರನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಅಂತಾ ಹೇಳಲಾಗ್ತಿದೆ. ಈ ಭಾಗದ ಶಾಸಕರು ಸಿಎಂ ವಿರುದ್ಧ ತಮ್ಮ ಅಸಮಾಧಾನವನ್ನ ನೇರವಾಗಿಯೇ ಹೊರ ಹಾಕಿದ್ದಾರೆ. ಸೋತವರಿಗೆ, ವಲಸೆ ಬಂದವರಿಗೆ ಹೆಚ್ಚಿನ ಆದ್ಯತೆ ಕೊಡುವುದಾದ್ರೆ ನಮ್ಮ ಪಾಡೇನು ಎಂದು ಪ್ರಶ್ನಿಸಿದ್ದಾರೆ. ಈ ಭಿನ್ನರಾಗ ಸಮನವಾಗುತ್ತಾ ಹೀಗೆ ಮುಂದುವರೆದು ಬಿಜೆಪಿ ಸರ್ಕಾರಕ್ಕೆ ಗಂಡಾಂತರವಾಗುತ್ತಾ ಕಾದು ನೋಡಬೇಕು.