ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ದೇಶದಕ್ಕೆ ಕಾಂಗ್ರೆಸ್ ಸಾಕಷ್ಟು ಜನಪರ ಯೋಜನೆಗಳನ್ನು ನೀಡಿದೆ. ಆದರೆ, ಜನರ ಬದುಕು ಹಸನು ಮಾಡುತ್ತೇನೆ ಎಂದು ಬಂದ ಬಿಜೆಪಿ ಸರ್ಕಾರ ನೋಟ್ ಬ್ಯಾನ್, ಜಿಎಸ್ಟಿ ಜಾರಿಗೆ ತಂದಿರುವುದು ರಾಷ್ಟ್ರೀಯ ದುರಂತವೆಂದು ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯನವರ 75ನೇ ಜನ್ಮ ದಿನದ ಪ್ರಯುಕ್ತ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಸಿದ್ದರಾಮಯ್ಯನವರನ್ನು ನಾನು ತುಂಬಾ ಇಷ್ಟಪಡುತ್ತೇನೆ. ಅವರ ವಿಚಾರಗಳನ್ನು, ಸಿದ್ಧಾಂತಗಳಿಗೆ ನನ್ನ ಸಹಮತವಿದೆ. ಐದು ವರ್ಷಗಳ ಕಾಲ ಕರ್ನಾಟಕ ಸರ್ಕಾರವನ್ನು ಮುನ್ನಡೆಸಿದ ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.
ನಾವು ಬಹು ಸಂಸ್ಕೃತಿಯ ಭಾರತವನ್ನು ನಂಬುತ್ತೇವೆ. ಅದನ್ನು ಕಾಪಾಡುತ್ತೇವೆ. ದೇಶವನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ಆದರೆ, ಬಿಜೆಪಿ ಒಡೆದು ಆಳುವ ನೀತಿ ಅನುಸರಿಸುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಭಾಗ್ಯಗಳ ಸುರಿಮಳೆ ಸುರಿಸಿದೆ. ಆದರೆ, ಬಿಜೆಪಿ ಸರ್ಕಾರ ಬಸವಣ್ಣನವರ ವಿಚಾರಧಾರೆಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ನೋಟ್ ಬ್ಯಾನ್ ಮಾಡಿ ಬಡವರು, ಮಧ್ಯಮ ವರ್ಗದವರಿಂದ ಹಣ ಕಸೆದುಕೊಂಡು ಮೂರ್ನಾಲ್ಕು ಜನರ ಜೇಬು ತುಂಬಿಸಿದರು. ಜಿಎಸ್ ಟಿ ಜಾರಿಗೆ ತಂದು ಸಣ್ಣ, ಮಧ್ಯಮ ಉದ್ಯಮಿಗಳಿಗೆ ,ರೈತರಿಗೆ, ಜನಸಾಮಾನ್ಯರಿಗೆ ಬರೆ ಎಳೆದರು. ರೈತಪರವಾಗಿ ನಾವು ತಂದ ಕೃಷಿ ಕಾಯ್ದೆಗೆ ತಿದ್ದುಪಡಿ ತಂದು ಒಂದು ವರ್ಷ ಕಾಲ ರೈತರು ಹೋರಾಟ ಮಾಡುವಂತೆ ಮಾಡಿದರು ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ಕಂಪ್ಯೂಟರ್, ಐಟಿ ಸಿಟಿಗಾಗಿ ಕರ್ನಾಟಕವನ್ನು ಅಮೆರಿಕನ್ನರು ನೆನಪು ಮಾಡಿಕೊಳ್ಳುತ್ತಿದ್ದರು. ಈಗ ಕೋಮು ಸಂಘರ್ಷದ ಕಾರಣಕ್ಕೆ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು.