ಪ್ರಜಾಸ್ತ್ರ ಸುದ್ದಿ
ಕಾರವಾರ: ಪರಿಶಿಷ್ಟ ಸಮಾಜದವರನ್ನು ಅವಹೇಳನ ಮಾಡುವ ರೀತಿಯಲ್ಲಿ ಮಾತನಾಡಿದ ನಟ ಉಪೇಂದ್ರ, ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.
ಪರಿಶಿಷ್ಟರನ್ನು ಅವಮಾನಿಸುವ, ಅವರ ಮೇಲೆ ದೌರ್ಜನ್ಯವೆಸಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ನಟ ಉಪೇಂದ್ರ, ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಹೇಳಿಕೆ ಸಂಬಂಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಲಾಯಿತು. ಇದೇ ವೇಳೆ ಮಣಿಪುರ ಘಟನೆ, ಸೌಜನ್ಯ ಪ್ರಕರಣದಲ್ಲಿಯೂ ನ್ಯಾಯ ಸಿಗಬೇಕೆಂದು ಹೇಳಲಾಯಿತು.
ನಟ, ರಾಜಕಾರಣಿ ಉಪೇಂದ್ರ ತಮ್ಮ ಪ್ರಜಾಕೀಯ ಪಕ್ಷದ 6ನೇ ವರ್ಷದ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವಾಗ ಬಳಸಿದ ಗಾದೆಮಾತು ವಿವಾದಕ್ಕೆ ದಾರಿಯಾಗಿ ಎಫ್ಐಆರ್ ಸಹ ದಾಖಲಾಗಿವೆ. ಇನ್ನು ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಆಗಸ್ಟ್ 2ರಂದು ನಡೆದ ಪ್ರತಿಭಟನೆ ವೇಳೆ ಆರಗ ಜ್ಞಾನೇಂದ್ರ ಅವರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಮೈ ಬಣ್ಣದ ವಿಚಾರವಾಗಿ ಕೀಳುಮಟ್ಟದಲ್ಲಿ ಮಾತನಾಡಿದ್ದು, ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು.