ಪ್ರಜಾಸ್ತ್ರ ಸುದ್ದಿ
ಕಾನ್ಪುರ್: ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕಾನ್ಪುರದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಬುಧವಾರ ಮಾತನಾಡಿದರು. ಮೋದಿ ರಾಮರಾಜ್ಯದಲ್ಲಿ ತಾರತಮ್ಯ ಇದೆ. ದಲಿತರು, ಹಿಂದುಳಿದವರು, ಬುಡಕಟ್ಟು ವರ್ಗದವರಿಗೆ ಬೇಕಾದ ಉದ್ಯೋಗ ಸೃಷ್ಟಿಸಿಲ್ಲ ಎಂದು ಕಿಡಿ ಕಾರಿದರು.
ಶೇ.50ರಷ್ಟು ಹಿಂದುಳಿದವರು, ಶೇ.15ರಷ್ಟು ದಲಿತರು, ಶೇ.15ರಷ್ಟು ಅಲ್ಪಸಂಖ್ಯಾತರು, ಶೇ.8ರಷ್ಟು ಬುಡಕಟ್ಟು ಸಮುದಾಯದವರಿದ್ದಾರೆ. ಇವರೆಲ್ಲ ಎಷ್ಟೇ ಕೂಗಿದರೂ ಉದ್ಯೋಗ ಸಿಗಲ್ಲ. ಅದಾನಿ, ಅಂಬಾನಿ, ಟಾಟಾ, ಬಿರ್ಲಾ ನವ ಭಾರತದ ಮಹಾರಾಜರು ಎಂದು ವಾಗ್ದಾಳಿ ನಡೆಸಿದರು.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಬುಡಕಟ್ಟು ರಾಷ್ಟ್ರಪತಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ. ಮಾಜಿ ರಾಷ್ಟ್ರಪತಿ ಕೋವಿಂದ್ ಅವರನ್ನು ಒಳಗೆ ಬಿಡಲಿಲ್ಲ. ದೇಶದ ಒಟ್ಟು ಸಂಪತ್ತಿನಲ್ಲಿ ಅತೀ ಹೆಚ್ಚು ಪಾಲು ಶೇ.2ರಿಂದ 3ರಷ್ಟು ಜನರ ಕೈಯಲ್ಲಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 38 ದಿನಗಳಿಂದ ಪಾದಯಾತ್ರೆ ನಡೆಯುತ್ತಿದೆ. ಅಮೇಠಿ ಜಿಲ್ಲೆಯ ಫರ್ಸಾಂತ್ ಗಂಜ್ ನಿಂದ ಯಾತ್ರೆ ಶುರುವಾಗಿದೆ. ಮಂಗಳವಾರ ರಾಯಬರೇಲಿ, ಲಖ್ನೋದಲ್ಲಿ ರ್ಯಾಲಿ ಸಾಗಿತ್ತು.