ಪ್ರಜಾಸ್ತ್ರ ಅಪರಾಧ ಸುದ್ದಿ
ತಿರುವನಂತಪುರಂ: ಈ ಘಟನೆ ನಿಜಕ್ಕೂ ಇಡೀ ಸಮಾಜ ತಲೆ ತಗ್ಗಿಸುವಂತಿದೆ. ನಮ್ಮ ಸುತ್ತ ಎಷ್ಟೊಂದು ನೀಚರು ಇರುತ್ತಾರೆ ಅನ್ನೋದಕ್ಕೆ ಸಾಕ್ಷಿಯಿದು. ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಯುವತಿಯನ್ನ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅತ್ಯಾಚಾರವೆಸಗಿರುವ ನೀಚ ಕೃತ್ಯ ನಡೆದಿದೆ. ಕಾಮುಕ ಆಂಬ್ಯುಲೆನ್ಸ್ ಚಾಲಕ ನೌಫಾಲ್ ವಿ ಎಂಬಾತನನ್ನ ಬಂಧಿಸಲಾಗಿದೆ.
ಕೇರಳದ ಪಟ್ಟಣಂತಿಟ್ಟು ಅರುಣ್ಮುಲಾದಲ್ಲಿ, ಯುವತಿಯರಿಬ್ಬರನ್ನ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಆಸ್ಪತ್ರೆಗೆ ಹೊರಟಿದ್ದಾನೆ. ಒಬ್ಬಳನ್ನ ಒಂದು ಆಸ್ಪತ್ರೆಯಲ್ಲಿ ಡ್ರಾಪ್ ಮಾಡಿದ್ದಾನೆ. ಮತ್ತೊಬ್ಬಳು ಯುವತಿಗೆ ತೀವ್ರ ಸೋಂಕು ಇದ್ದ ಕಾರಣ, ಬೇರೆ ಆಸ್ಪತ್ರೆಗೆ ದಾಖಲಿಸಲು ಹೇಳಲಾಗಿದೆ.
ಆಂಬ್ಯುಲೆನ್ಸ್ ನಲ್ಲಿ ಏಕಾಂಗಿಯಾಗಿದ್ದ 19 ವರ್ಷದ ಯುವತಿಯನ್ನ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಆಕೆಯನ್ನ ಪಾಂಡಲಂ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾನೆ. ಇಂಥಾ ಅತ್ಯಂತ ನೀಚ ಕೃತ್ಯ ಶನಿವಾರ ರಾತ್ರಿ ನಡೆದಿದೆ. ಅಂದೆ ಕಾಮುಕ ನೌಫಾಲ್ ನನ್ನ ಅರೆಸ್ಟ್ ಮಾಡಲಾಗಿದೆ. ಘಟನೆ ಬಗ್ಗೆ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಕಾಯಂಕುಲಂ ಮೂಲದ ಆರೋಪಿಯನ್ನ ಜಿವಿಕೆ ಇಎಂಆರ್ ಐ ಕಂಪನಿ ಕೆಲಸದಿಂದ ವಜಾ ಮಾಡಿದೆ. ಗಂಭೀರವಾದ ದುಷ್ಕೃತ್ಯ ಎಸಗಿದ್ದು, ನಿನ್ನಿಂದ ಕಂಪನಿಯ ಹೆಸರಿಗೆ ಮಸಿ ಬಳಿದಿದೆ ಎಂದು ಹೇಳಿ ಕೆಲಸದಿಂದ ವಜಾ ಮಾಡಲಾಗಿದೆ.