ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಒಂದಿಷ್ಟು ಮಳೆಯಾಗುತ್ತಿದೆ. ಇದರಿಂದಾಗಿ ರೈತಾಪಿ ವರ್ಗದವರಿಗೆ ಖುಷಿಯಾದರೆ, ಪಟ್ಟಣದಲ್ಲಿರುವ ಜನರ ಪರಿಸ್ಥಿತಿ ಮತ್ತೊಂದು ರೀತಿಯಾಗಿದೆ. ಯಾಕಂದರೆ, ಇಲ್ಲಿನ ಬಡಾವಣೆಗಳಲ್ಲಿನ ರಸ್ತೆ ಸ್ಥಿತಿ ಅನುಭವಿಸಿದವರಿಗೆ ಮಾತ್ರ ಗೊತ್ತು.
ಒಂದಿಷ್ಟು ಮಳೆಯಾದರೆ ಸಾಕು ಪಟ್ಟಣದ ಬಹುತೇಕ ವಾರ್ಡ್ ಗಳ ರಸ್ತೆಗಳು ಕೆಸರು ಗದ್ದೆಯಾಗುತ್ತವೆ. ನಡೆದುಕೊಂಡು ಹೋಗುವವರು ಇರಲಿ, ವಾಹನ ಸವಾರರು ಸರ್ಕಸ್ ಮಾಡಬೇಕು. ಇದು ಪ್ರತಿ ವರ್ಷದ ಗೋಳು. ಸಾಯಿ ನಗರ, ಸೋಂಪುರ ರಸ್ತೆ, ಬಂದಾಳ ರಸ್ತೆ, ವಿದ್ಯಾನಗರ, ಅಂಬೇಡ್ಕರ್ ಸರ್ಕಲ್ ರಸ್ತೆ, ಬಸ್ ನಿಲ್ದಾಣ ಹಾಗೂ ಹಳೇ ಬಜಾರ್ ರಸ್ತೆ ಸೇರಿದಂತೆ ಯಾವುದೇ ಕಡೆ ಹೋದರೂ ಬರೀ ತಗ್ಗು ಗುಂಡಿಗಳು, ಕೆಸರುಮಯ.
ಶಾಸಕರು, ಪುರಸಭೆ ಅಧ್ಯಕ್ಷರು ಸೇರಿದಂತೆ 23 ವಾರ್ಡ್ ಗಳ ಸದಸ್ಯರು ಒಂದು ಸಾರಿ ಬಡಾವಣೆಗಳಲ್ಲಿ ಸಂಚರಿಸಿದರೆ ಅಲ್ಲಿನ ಮೂಲಭೂತ ಸಮಸ್ಯೆಗಳ ದರ್ಶನವಾಗುತ್ತೆ. ಆದರೆ, ಯಾರು ಈ ಕೆಲಸ ಮಾಡುತ್ತಿಲ್ಲವೆಂದು ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಸುಧಾರಣೆಯಾಗುವ ಬದಲು ಹಾಳಾಗುತ್ತಿದೆ ಅನ್ನೋ ಅಪವಾದ ಕೇಳಿ ಬರುತ್ತಿದೆ. ಮಳೆಯಿಂದ ಚರಂಡಿಗಳು ತುಂಬಿಕೊಂಡು ಮನೆಗಳಿಗೆ, ರಸ್ತೆಗಳಿಗೆ ಗಲೀಜು ನೀರು ನುಗ್ಗುವ ಮೊದಲೇ ಅದನ್ನಾದರೂ ಕೂಡಲೇ ಸರಿಪಡಿಸುವ ಕೆಲಸವನ್ನು ಪುರಸಭೆ ಮಾಡಬೇಕಿದೆ.