ಪ್ರಜಾಸ್ತ್ರ ಸುದ್ದಿ
ಸಿಂದಗಿ: ಸಂವಿಧಾನದ ಅಡಿಯಲ್ಲಿ ಆಡಳಿತ ನಡೆಸಲು ಇಷ್ಟಪಡದ ಬಿಜೆಪಿ ಧರ್ಮದ ರಾಜಕಾರಣ ಮಾಡುತ್ತದೆ. ಅಭಿವೃದ್ಧಿ ಪರ, ಜನಪರ, ಸಮಾನತೆ, ಸಮಾನ ಅವಕಾಶದಡಿಯಲ್ಲಿ ಕೆಲಸ ಮಾಡುವುದಿಲ್ಲ. ಬಿಜೆಪಿಯ ಸೂತ್ರ ಆರ್ ಎಸ್ಎಸ್ ಬಳಿಯಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಎಚ್.ಸಿ ಮಹಾದೇವಪ್ಪ ವಾಗ್ದಾಳಿ ನಡೆಸಿದರು.
ಸಿಂದಗಿ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಅವರು ಕಾಂಗ್ರೆಸ್ ಮುಖಂಡ ರಾಜಶೇಖರ ಕೂಚಬಾಳ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಧರ್ಮ ಸಂಸತ್ತಿನ ಮೇಲೆ ನಂಬಿಕೆ ಇಟ್ಟುಕೊಂಡಿದೆ. ಸಂವಿಧಾನಬದ್ಧ ಸಂಸ್ಥೆಗಳನ್ನು ಚುನಾವಣೆಯ ಸಂದರ್ಭದಲ್ಲಿ ತನ್ನ ಅಸ್ತ್ರಗಳನ್ನಾಗಿ ಬಳಸಿಕೊಳ್ಳುತ್ತೆ ಎಂದರು.
ಜಾತಿ, ಧರ್ಮದ ಮೇಲೆ ರಾಜಕಾರಣ ಮಾಡುವ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮಾರಕ. ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆ, ಎನ್ ಆರ್ ಸಿ, ಎನ್ಇಪಿ ಸೇರಿದಂತೆ ಹಲವು ಕಾಯ್ದೆಗಳ ಮೂಲಕ ಬಹುತ್ವ ಭಾರತಕ್ಕೆ ಕಂಟಕವಾಗಿರುವ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು. ಈ ವೇಳೆ ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷೆ ಭಾರತಿ ಹೊಸಮನಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳೆ, ಡಿಎಸ್ಎಸ್ ಜಿಲ್ಲಾ ಸಂಚಾಲಕ ವೈ.ಸಿ ಮಯೂರ, ಪರಶುರಾಮ ಕಾಂಬಳೆ, ಅಶೋಕ ಬಿಜಾಪುರ ಸೇರಿ ಅನೇಕರಿದ್ದರು. ರಾಜಶೇಖರ ಕೂಚಬಾಳ ಸ್ವಾಗತಿಸಿ ವಂದಿಸಿದರು.