ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಿಜಯಪುರದ ಸಿಂದಗಿ ಹಾಗೂ ಹಾವೇರಿಯ ಹಾನಗಲ್ ವಿಧಾನಸಭೆಯ ಉಪ ಚುನಾವಣೆ ಸಂಬಂಧ ಭಾನುವಾರ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದೆ. ಎರಡೂ ಕ್ಷೇತ್ರಗಳಿಂದ ಮೂರು ಮೂರು ಹೆಸರು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಿಂದಗಿ ವಿಧಾನಸಭೆಯಿಂದ ಮಾಜಿ ಶಾಸಕ ರಮೇಶ ಭೂಸನೂರ, ಲಕ್ಷ್ಮಣ ಸವದಿ ಸಂಬಂಧಿ ಸಂಗನಗೌಡ ಪಾಟೀಲ ಹಾಗೂ ಬಿಜೆಪಿ ಮುಖಂಡ ಸಿದ್ದು ಬಿರಾದಾರ ಹೆಸರು ಶಿಫಾರಸು ಮಾಡಲಾಗಿದೆಯಂತೆ. ಇನ್ನು ಹಾನಗಲ್ ನಲ್ಲಿ ಸಂಸದ ಶಿವಕುಮಾರ ಉದಾಸಿ ಪತ್ನಿ ರೇವತಿ ಉದಾಸಿ, ಶಿವರಾಜ್ ಸಜ್ಜನ್ ಹಾಗೂ ಕಲ್ಯಾಣಕುಮಾರ್ ಶೆಟ್ಟರ್ ಹೆಸರು ಶಿಫಾರಸು ಆಗಿದೆಯಂತೆ.
ಆದರೆ, ಕೆಲ ಮೂಲಗಳ ಪ್ರಕಾರ ಸಿಂದಗಿಗೆ ರಮೇಶ್ ಭೂಸನೂರ್, ಹಾನಗಲ್ ಗೆ ರೇವತಿ ಉದಾಸಿ ಹೆಸರು ಫೈನಲ್ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಯಾರಿಗೆ ಗೆಲ್ಲುವ ಅವಕಾಶ ಹೆಚ್ಚಿದೆಯೋ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.