ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಪುರಸಭೆಯ 2023-24ನೇ ಸಾಲಿನ ಬಜೆಟ್ ಕುರಿತು ಕರೆಯಲಾಗಿದ್ದ ಸಭೆಯಲ್ಲಿ, ಅವ್ಯವಹಾರ ಮಾಡುತ್ತಿರುವ ಕೆಲ ಸಿಬ್ಬಂದಿ ವಿರುದ್ಧ ಅಧ್ಯಕ್ಷ ಹಣಮಂತ ಸುಣಗಾರ ಗರಂ ಆಗಿದ್ದು, ನಿಮ್ಮನ್ನ ಜೈಲಿಗೆ ಕಳುಹಿಸುತ್ತೇನೆ. ಬಳ್ಳಾರಿ ಜೈಲು ಖಾಲಿಯಿದೆ ಎಂದು ಎಚ್ಚರಿಕೆ ನೀಡಿದರು.
ಆಸ್ತಿ ಬೋಜಾ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ವಿನಾಃಕಾರಣ ಹಣ ಪಡೆಯಲಾಗುತ್ತಿದೆ. ಶೇಕಡ 0.5ರಷ್ಟು ಪಡೆಯುತ್ತಿರುವುದನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಸದಸ್ಯರಾದ ಭೀಮಣ್ಣ ಕಲಾಲ, ಬಸವರಾಜ ಯರನಾಳ ಧ್ವನಿ ಎತ್ತಿದರು. ಆಗ ಅಧಿಕಾರಿಗಳು, ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಕೆಲ ಸಿಬ್ಬಂದಿ ವಿರುದ್ಧ ಹಣ ಪಡೆಯುತ್ತಿರುವ ಆರೋಪ ಕೇಳಿ ಬಂದಿತು. ಆಗ ಅಧ್ಯಕ್ಷ ಹಣಮಂತ ಸುಣಗಾರ ಜೈಲಿಗೆ ಕಳುಹಿಸುವ ಎಚ್ಚರಿಕೆ ನೀಡಿದರು. ಬೋಜಾ ಏರಿಸುವುದಕ್ಕೆ ತೆಗೆದುಕೊಳ್ಳುವ ಶೇಕಡ 0.5 ಫೀ ವಿಚಾರಕ್ಕೆ ವಿಶೇಷ ಸಭೆ ಕರೆದು ರದ್ದುಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ ಎಂದು ಅಧ್ಯಕ್ಷರು ಹೇಳಿದರು.
ಆಸ್ತಿ ತೆರಿಗೆ ಹೆಚ್ಚಳ ಮಾಡುವ ಕುರಿತು ಚರ್ಚೆ ನಡೆಯಿತು. ಆಗ ಸದಸ್ಯರು ಸಾರ್ವಜನಿಕರಿಗೆ ಏನು ಸೇವೆ ನೀಡುತ್ತಿದ್ದೀರಿ ಎಂದು ತೆರಿಗೆ ಹೆಚ್ಚಳ ಮಾಡೋದು ಎಂದು ಪ್ರಶ್ನಿಸಿದರು. ನೀರು, ರಸ್ತೆ, ಕಸ, ವಿದ್ಯುತ್ ಸಮಸ್ಯೆ ಸಾಕಷ್ಟಿದೆ. ಸರಿಯಾಗಿ ಸೇವೆ ನೀಡದೆ ತೆರಿಗೆ ಹೆಚ್ಚಳ ಮಾಡುವುದು ಎಷ್ಟು ಸರಿ ಎಂದು ಕೇಳುವ ಮೂಲಕ ವಿರೋಧ ವ್ಯಕ್ತವಾಯಿತು. 2023-24ನೇ ಸಾಲಿನ ಬಜೆಟ್ ಮಂಡಿಸಲಾಯಿತು.
ಈ ವೇಳ ಉಪಾಧ್ಯಕ್ಷ ಹಾಸೀಂಪೀರ ಆಳಂದ, ಸದಸ್ಯರಾದ ರಾಜಣ್ಣ ನಾರಾಯಣಕರ, ಸಂದೀಪ ಚೌರ, ಬಾಷಾಸಾಬ್ ತಾಂಬೋಳಿ, ಪ್ರತಿಭಾ ಕಲ್ಲೂರ, ಗೊಲ್ಲಾಳಪ್ಪ ಬಂಕಲಗಿ, ಉಮಾದೇವಿ ಸುಲ್ಪಿ, ಭಾಗವ್ವ ಡೋಣೂರ, ಪಾರ್ವತಿ ದುರ್ಗಿ, ಮಹಾದೇವಿ ನಾಯ್ಕೋಡಿ, ಮುಖ್ಯಾಧಿಕಾರಿ ಮೋಹನ ಜಾಧವ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.