ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಳವಾರ ಹಾಗೂ ಪರಿವಾರ ಸಮಾಜಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕೆಂದು ಕೇಂದ್ರ ಸರ್ಕಾರ, ರಾಜ್ಯಸಭೆ ಹಾಗೂ ರಾಷ್ಟ್ರಪತಿಗಳಿಂದ ಅಂಕಿತವಿದ್ದರೂ, ರಾಜ್ಯ ಸರ್ಕಾರ ಅನ್ಯಾಯ ಮಾಡ್ತಿದೆ. ಕೆಲ ರಾಜಕೀಯ ಪ್ರಭಾವಿಗಳ ಒತ್ತಡಕ್ಕೆ ಮಣಿದು, ಗೊಂದಲದ ವಾತಾವರಣ ನಿರ್ಮಾಣ ಮಾಡಿ, ಎಸ್ಟಿ ಪ್ರಮಾಣ ಪತ್ರ ನೀಡದೆ ಅನ್ಯಾಯ ಮಾಡ್ತಿದೆ ಎಂದು ತಳವಾರ, ಪರಿವಾರ ಸಮಾಜ ಸೇವಾ ಸಮಿತಿ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.
ಎಸ್ಟಿ ಪ್ರಮಾಣ ಪತ್ರಕ್ಕಾಗಿ ಆಗಸ್ಟ್ 15ರಂದು ರಕ್ತದಾನ ಚಳವಳಿ, ಆಗಸ್ಟ್ 30ರಂದು ಜನಪ್ರತಿನಿಧಿಗಳ ಮನೆ ಎದುರು ಧರಣಿ ಸತ್ಯಾಗ್ರಹ ಹಾಗೂ 3ನೇ ಹಂತದಲ್ಲಿ ವಿಧಾನಸಭೆ ಅಧಿವೇಶನ ಮುಗಿಯುವ ತನಕ ಶಾಂತಿಯತ ಧರಣಿ ಸತ್ಯಾಗ್ರಹ ಮಾಡಿಕೊಂಡು ಬರಲಾಗಿದೆ. ಹೀಗಾಗಿ ಸೆಪ್ಟೆಂಬರ್ 22ರಿಂದ 7 ದಿನಗಳ ಕಾಲ ಸಿಂದಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಶಾಂತಿಯುತವಾಗಿ ಧರಣಿ ನಡೆಸಲಾಗಿದೆ.
ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ತಳವಾರ, ಪರಿವಾರ ಸಮಾಜ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಶರಣಪ್ಪ ಸುಣಗಾರ ಅವರ ಸಲಹೆಯಂತೆ ಧರಣಿ ಸತ್ಯಗ್ರಾಹ ಹಿಂಪಡೆಯುತ್ತಿದ್ದೇವೆ. ಕೂಡಲೇ ಸರ್ಕಾರ ತಳವಾರ ಹಾಗೂ ಪರಿವಾರ ಸಮಾಜಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡಬೇಕು. ಇಲ್ಲದೆ ಹೋದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡುವ ಮೂಲಕ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿ ಪತ್ರ ಸಲ್ಲಿಸಲಾಯ್ತು.
ಈ ವೇಳೆ ತಳವಾರ, ಪರಿವಾರ ಸಮಾಜ ಸೇವಾ ಸಮಿತಿ ಅಧ್ಯಕ್ಷ ಶ್ರೀಶೈಲ ಬುಯ್ಯಾರ, ಸಂತೋಷ ಹರನಾಳ, ಶಿವಣ್ಣ ಕೋಟರಗಸ್ತಿ, ಯಲ್ಲು ಬಳುಂಡಗಿ, ಅನಿಲ ಕಡಕೋಳ, ಮಲ್ಲು ಹಿರೋಳ್ಳಿ, ಮಡಿವಾಳ ನಾಯ್ಕೋಡಿ, ಈರಗಂಟೆಪ್ಪ ದೇವಣಗಾಂವ, ಯಲ್ಲು ಬಳುಂಡಗಿ, ಶಂಕರ ಕುರಿ, ಮಲ್ಲು ಗತ್ತರಗಿ, ಪರಶುರಾಮ ಕೋಟರಗಸ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ರು.