ಪ್ರಜಾಸ್ತ್ರ ಸುದ್ದಿ
ಮುಂಬೈ: ಸಮೃದ್ಧಿ ಮಹಾಮಾರ್ಗ್ ಎಕ್ಸ್ ಪ್ರೆಸ್ ವೇನಲ್ಲಿ ಕಳೆದ ಶನಿವಾರ ಬಸ್ ಅಪಘಾತದಲ್ಲಿ ಬರೋಬ್ಬರಿ 25 ಜನರು ಪ್ರಾಣ ಕಳೆದುಕೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ಮಹಾರಾಷ್ಟ್ರದಲ್ಲಿ ನಡೆದಿದೆ. ಧುಲೆ ಜಿಲ್ಲೆಯ ಹೆದ್ದಾರಿಯಲ್ಲಿ ಕಂಟೈನರ್ ಟ್ರಕ್ ವೊಂದು ಹೋಟೆಲ್ ಗೆ ನುಗ್ಗಿದ ಪರಿಣಾಮ 10 ಜನರು ಮೃತಪಟ್ಟಿರುವ ದುರಂತ ನಡೆದಿದೆ.
ಟ್ರಕ್ ಬ್ರೇಕ್ ಫೇಲ್ ಆಗಿ, ಚಾಲಕನ ನಿಯಂತ್ರಣ ತಪ್ಪಿ ನಾಲ್ಕು ವಾಹನಗಳಿಗೆ ಡಿಕ್ಕಿಯಾಗಿ ಹೆದ್ದಾರಿಯಲ್ಲಿನ ಬಸ್ ನಿಲ್ದಾಣದ ಪಕ್ಕದಲ್ಲಿನ ಹೋಟೆಲ್ ಗೆ ಗುದ್ದಿದೆ. ಇದರಿಂದಾಗಿ 10 ಜನರು ಪ್ರಾಣ ಕಳೆದುಕೊಂಡಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರಂತೆ.
ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮುಂಬೈ-ಆಗ್ರಾ ಹೆದ್ದಾರಿಯ ಪಲಾಸ್ನೆರ ಗ್ರಾಮದ ಹತ್ತಿರ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಧುಲೆ ಹಾಗೂ ಶಿರ್ಪುರನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್ಸಿಗಾಗಿ ಕಾಯುತ್ತಿದ್ದವರಿಗೆ ಟ್ರಕ್ ರೂಪದಲ್ಲಿ ಸಾವು ಬಂದು ಎರಗಿದೆ.